ಜಮ್ಮು-ಕಾಶ್ಮೀರ : 'ಪಾಕಿಸ್ತಾನ-ಭಾರತ'ದ ದ್ವಿಪಕ್ಷೀಯ ಮಾತುಕತೆ ಮುರಿದುಬಿದ್ದಿದ್ದರೂ, ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕನೊಂದಿಗೆ ಮಾತುಕತೆ ನಡೆಸಿದ್ದಾರೆ.
ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸಯೀದ್ ಅಲಿ ಶಾ ಗಿಲಾನಿಯೊಂದಿಗೆ ಪಾಕ್ ಹೈಕಮಿಷನರ್ ಅಬ್ದುಲ್ ಬಸೀತ್ ಮಾತುಕತೆ ನಡೆಸಿದ್ದಕ್ಕಾಗಿಯೇ ಪಾಕಿಸ್ತಾನದೊಂದಿಗೆ ಭಾರತ ಸರ್ಕಾರ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಿತ್ತು. ಇದೀಗ ಮತ್ತೊಮ್ಮೆ ಪ್ರತ್ಯೇಕವಾದಿ ನಾಯಕನನ್ನು ಪಾಕ್ ಹೈಕಮಿಷನರ್ ಭೇಟಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರ ಬಗ್ಗೆ ಸಯೀದ್ ಗಿಲಾನಿ ಹಾಗೂ ಅಬ್ದುಲ್ ಬಸೀತ್ ಮಾತುಕತೆ ನಡೆಸಿದ್ದಾರೆ. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ಶೀಘ್ರವೇ ಬಗೆಹರಿಯಬೇಕು ಎಂದು ಒತ್ತಾಯಿಸಿರುವ ಗಿಲಾನಿ, ಈವರೆಗೂ ಅದೆಷ್ಟೋ ಬಾರಿ ಉಭಯ ದೇಶಗಳ ನಡುವೆ ಚರ್ಚೆ ನಡೆದಿದೆ, ಆದರೂ ವಿವಾದ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಮ್ಮು-ಕಾಶ್ಮೀರದ ರಾಜಕೀಯ ಸ್ಥಿತಿಗಳ ಬಗ್ಗೆಯೂ ಪಾಕ್ ಹೈಕಮಿಷನರ್ ಹಾಗೂ ಅಬ್ದುಲ್ ಬಸೀತ್ ಜೊತೆಗೆ ಚರ್ಚೆ ನಡೆಸಿರುವುದಾಗಿ ಗಿಲಾನಿ ಹೇಳಿದ್ದಾರೆ. ಪ್ರತ್ಯೇಕತಾವಾದಿ ನಾಯಕ ಹಾಗೂ ಪಾಕಿಸ್ತಾನ ಕಮಿಷನರ್ ಭೇಟಿಗೆ ಕಾಂಗ್ರೆಸ್ ನಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಗಿಲಾನಿ-ಅಬ್ದುಲ್ ಬಸೀತ್ ಭೇಟಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದೆ.