ನವದೆಹಲಿ : 'ಕಲ್ಲಿದ್ದಲು' ಹಾಗೂ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಭಾರತ ಸರ್ಕಾರದ ಬೊಕ್ಕಸಕ್ಕೆ ಬೃಹತ್ ಪ್ರಮಾಣದ ಹಣ ಹರಿದುಬರುತ್ತಿದೆ. ಎಲ್ಲಾ ಅಂದಾಜುಗಳನ್ನೂ ಮೀರಿ ಈ ವರೆಗೆ ಸರ್ಕಾರಕ್ಕೆ 3 ಲಕ್ಷಕೋಟಿ ರೂಪಾಯಿ ಆದಾಯ ಬಂದಿದೆ.
ಕೇವಲ 32 ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯಿಂದ ಸರ್ಕಾರಕ್ಕೆ 2.07ಲಕ್ಷ ಕೋಟಿ ರೂಪಾಯಿ ಲಾಭ ಉಂಟಾಗಿದ್ದರೆ, ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ 94,000 ಕೋಟಿ ರೂಪಾಯಿಗಳಷ್ಟು ಲಾಭ ಬಂದಿದೆ. ರದ್ದುಗೊಂಡಿದ್ದ 204 ಕಲ್ಲಿದ್ದಲು ನಿಕ್ಷೇಪಗಳ ಪೈಕಿ 32 ನಿಕ್ಷೇಪಗಳ ಹರಾಜಿನಿಂದ ಸಿ.ಎ.ಜಿ ಅಂದಾಜು ಮಾಡಿದ್ದ 1.86 ಲಕ್ಷ ಕೋಟಿಗಿಂತಲೂ ಸರ್ಕಾರಕ್ಕೆ ಉತ್ತಮ ಆದಾಯ ಬಂದಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪೀಯೂಷ್ ಗೋಯೆಲ್ ತಿಳಿಸಿದ್ದಾರೆ.
ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ಆದಾಯ ದೊರೆತಿರುವುದರಿಂದ ವಿದ್ಯುತ್ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಲ್ಲಿದ್ದಲು ಹರಾಜು ಪ್ರಕ್ರಿಯೆಯ ಮೊದಲನೇ ಭಾಗದಲ್ಲಿ 19 ಗಣಿಗಳು ಒಂದು ಲಕ್ಷ ಕೋಟಿಗೆ ಹರಾಜಾಗಿದ್ದು, ಇನ್ನೂ ಹೆಚ್ಚಿನ ಆದಾಯ ನಿರೀಕ್ಷಿಸಲಾಗುತ್ತಿದೆ.
ಇನ್ನು 2ಜಿ, 3ಜಿ ತರಂಗಾಂತರ ಹರಾಜು ಪ್ರಕ್ರಿಕೆಯೆ ಇನ್ನೂ ಬಾಕಿ ಇರುವಾಗಲೇ, ಈ ಹಿಂದೆ ಅಂದಾಜಿಸಲಾಗಿದ್ದ 82 ಸಾವಿರ ಕೋಟಿಗಿಂತಲೂ ಹೆಚ್ಚು ಮೊತ್ತ ಸರ್ಕಾರದ ಬೊಕ್ಕಸ ಸೇರಿದೆ.