ಜಮ್ಮು-ಕಾಶ್ಮೀರ : ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಮಸ್ರತ್ ಆಲಂ, ಸರ್ಕಾರಕ್ಕೆ ಸವಾಲು ಹಾಕಿದ್ದು, ಕೇಂದ್ರ ಹಾಗೂ ಜಮ್ಮು-ಕಾಶ್ಮೀರ ಸರ್ಕಾರಗಳಿಗೆ ತಲೆನೋವಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.
ತನ್ನನ್ನು ನಿಜವಾದ ಪ್ರತ್ಯೇಕತಾವಾದಿ ನಾಯಕ ಎಂದು ಹೇಳಿಕೊಂಡಿರುವ ಮಸ್ರತ್ ಆಲಂ, ಜನಾಭಿಪ್ರಾಯ ಸಂಗ್ರಹಣೆ ಮೂಲಕ ತನ್ನ ಹೇಳಿಕೆ ಸುಳ್ಳೆಂದು ಸಾಬೀತು ಪಡಿಸಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾನೆ. ಭಾರತ ಸರ್ಕಾರಕ್ಕೆ ಜಮ್ಮು-ಕಾಶ್ಮೀರದಲ್ಲಿ ಬೆಂಬಲ ಇದ್ದು, ಇಲ್ಲಿನ ಜನ ಭಾರತದೊಂದಿಗೇ ಇರಲು ಬಯಸುತ್ತಿದ್ದಾರೆ ಎಂಬ ಆತ್ಮವಿಶ್ವಾಸ ಇದ್ದರೆ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಗಿ ಕಾಶ್ಮೀರ ವಿವಾದವನ್ನು ಒಂದೇ ಬಾರಿಗೆ ಇತ್ಯರ್ಥಗೊಳಿಸಲಿ ಎಂದು ಸವಾಲು ಹಾಕಿದ್ದಾರೆ.
ಕಾಶ್ಮೀರ ವಿಷಯದಲ್ಲಿ ತನ್ನಂಥವರು ಮಾತ್ರ ಸಮಸ್ಯೆ ಉಂಟುಮಾಡುತ್ತಿದ್ದಾರೆ ಎನ್ನುವುದಾದರೆ, ಕೇಂದ್ರ ಸರ್ಕಾರ ಜನಾಭಿಪ್ರಾಯ ಸಂಗ್ರಹಣೆಗೆ ಏಕೆ ಮುಂದಾಗುತ್ತಿಲ್ಲ ಎಂದು ಮಸ್ರತ್ ಆಲಂ ಪ್ರಶ್ನಿಸಿದ್ದಾರೆ. ಹಿಂದೂಸ್ಥಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಮಸ್ರತ್ ಆಲಂ ಈ ಸವಾಲು ಹಾಕಿದ್ದಾರೆ.
ಇದೇ ವೇಳೆ ತಾವು ಯಾರ ಬೆಂಬಲದಿಂದಲೂ ಬಿಡುಗಡೆಯಾಗಿಲ್ಲ, ಕಾನೂನು ರೀತಿಯಲ್ಲೇ ಬಿಡುಗಡೆ ಮಾಡಲಾಗಿದೆ. ನನ್ನ ವಿರುದ್ಧ ದಾಖಲಾಗಿದ್ದ ಎಲ್ಲಾ 27 ಪ್ರಕರಣಗಳಲ್ಲೂ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾಗಿರುವುದಾಗಿ ಮಸ್ರತ್ ಆಲಂ ತಿಳಿಸಿದ್ದಾರೆ.
ತಮ್ಮ ಮುಂದಿನ ಚಟುವಟಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಸ್ರತ್ ಆಲಂ, ನಾನು ಸಣ್ಣ ಜೈಲಿನಿಂದ ಕಾಶ್ಮೀರವೆಂಬ ದೊಡ್ಡ ಜೈಲಿಗೆ ಬಂದಿದ್ದೇನೆ, ಸ್ವಾತಂತ್ರ್ಯ ಪಡೆಯಲು ಹೋರಾಡುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ಕಾಶ್ಮೀರ ವಿಷಯದ ಬಗ್ಗೆ ಮತ್ತೋರ್ವ ಪ್ರತ್ಯೇಕವಾದಿ ಮುಖಂಡ ಸೈಯ್ಯದ್ ಅಲಿ ಷಾ ಗಿಲಾನಿಯೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.