ನವದೆಹಲಿ : ಬೆಂಗಳೂರಿನ ಜಿಂದಾಲ್ ಪ್ರಕೃತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮುಂದಿನ ವಾರದಿಂದ ದೆಹಲಿಯಲ್ಲಿ 5 ರೂಂಗಳನ್ನೊಳಗೊಂಡ ಬಂಗಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸಿವಿಲ್ ಲೈನ್ಸ್ ನಲ್ಲಿರುವ ಬಂಗಲೆಯಲ್ಲಿ ಈಗಾಗಲೇ ಎಲ್ಲಾ ಸಿದ್ಧತೆಗಳೂ ಬಹುತೇಕ ಪೂರ್ಣಗೊಂಡಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರವಿಂದ್ ಕೇಜ್ರಿವಾಲ್, ಮಾ.17ರಂದು ದೆಹಲಿಗೆ ವಾಪಸ್ಸಾಗಲಿದ್ದಾರೆ. ಫೆ.14ರಂದು ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅರವಿಂದ್ ಕೇಜ್ರಿವಾಲ್ ಅವರು ತಮಗೆ ಸೆಂಟ್ರಲ್ ಪೂಲ್ ಸೌಕರ್ಯಗಳನ್ನೊಳಗೊಂಡ ಬಂಗಲೆಯನ್ನು ನೀಡುವಂತೆ ನಗರಾಭಿವೃದ್ಧಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು.
ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾಗಿರುವ ಬಂಗಲೆಯಲ್ಲಿ ಸುಮಾರು 300 ಜನರಿಗಾಗುವಷ್ಟು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಈ ಬಂಗಲೆ 4 ಬೆಡ್ ರೂಂ, ಒಂದು ಗೆಸ್ಟ್ ರೂಂ, 2 ಕಚೇರಿ ಹಾಗೂ ಲಾನ್ ನ್ನು ಹೊಂದಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾಗೆ ಮಥುರಾ ರಸ್ತೆಯಲ್ಲಿ 4 ರೂಮಿನ ಡ್ಯುಪ್ಲೆಕ್ಸ್ ಮನೆಯನ್ನು ನೀಡಲಾಗಿದೆ. ಇದನ್ನು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಮ್ಮ ಕಚೇರಿಯನ್ನಾಗಿ ಬಳಸುತ್ತಿದ್ದರು.
ಅಧಿಕಾರಕ್ಕೆ ಬಂದರೂ ಆಮ್ ಆದ್ಮಿ(ಸಾಮಾನ್ಯ ನಾಗರಿಕ)ರಂತೆಯೇ ಇರುವುದಾಗಿ ಅರವಿಂದ್ ಕೇಜ್ರಿವಾಲ್ ಈ ಹಿಂದೆ ಹೇಳಿದ್ದರು.