ಕೊಲಂಬೋ : ಕಳೆದ 28 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ಪ್ರಧಾನಿ ಶ್ರೀಲಂಕಾ ದೇಶಕ್ಕೆ ಭೇಟಿ ನೀಡುತ್ತಿದ್ದು ಹಲವಾರು ಕಾರಣಗಳಿಗಾಗಿ ಇದೊಂದು ಐತಿಹಾಸಿಕ ಬೇಟಿಯಾಗಿದೆ. ಮೋದಿಯವರು ಶುಕ್ರವಾರ, ಮಾ.13ರ ನಸುಕಿನಲ್ಲಿ ಶ್ರೀಲಂಕಾದ ರಾಜಧಾನಿ ಕೊಲೊಂಬೋದಲ್ಲಿ ಬಂದಿಳಿದರು.
ಮಾರಿಷಸ್ ನ ಪೋರ್ಟ್ ಲೂಯಿಸ್ ನಿಂದ ರಾತ್ರಿ ಪ್ರಯಾಣ ಬೆಳೆಸಿ ಶ್ರೀಲಂಕಾಕ್ಕೆ ಬೆಳಗ್ಗೆ 5.25ಕ್ಕೆ ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ ಬಂದಿಳಿದ ಮೋದಿಯವರನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ವಿಮಾನ ನಿಲ್ದಾಣದಲ್ಲಿ ಬರಮಾಡಿಗೊಂಡರು.
ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರಗಳಾದ ಸೀಷೆಲ್ಲೆಸ್, ಮಾರಿಷಿಯಸ್ ಸೇರಿದಂತೆ ಮೂರು ದೇಶಗಳ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿಯವರ ಈ ಪ್ರವಾಸ ಭಾರತದ ರಕ್ಷಣೆ ಹಾಗೂ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ತುಂಬಾ ಮಹತ್ವ ಪಡೆದುಕೊಂಡಿದೆ. ಸೇಷೆಲ್ಲೆಸ್ ಮತ್ತು ಮಾರಿಷಿಯಸ್ ಗಳ ತಲಾ ಒಂದೊಂದು ದ್ವೀಪವನ್ನು ಭಾರತ 'ಅಭಿವೃದ್ಧಿ' ಪಡಿಸುವುದಕ್ಕಾಗಿ ಈಗಾಗಲೇ ಪಡೆದುಕೊಂಡಿದ್ದು, ಈ ಭಾಗದಲ್ಲಿ ಹೆಚ್ಚುತ್ತಿರುವ ಚೀನಾ ದೇಶದ ಪ್ರಭಾವವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಲಿದೆ. ಭಾರತ ಹಿಂದೂಮಹಾಸಾಗರದಲ್ಲಿ ತನ್ನ್ ಸ್ವಾಮಿತ್ವವನ್ನು ಪುನರ್ ಸ್ಥಾಪಿಸುವುದು ರಕ್ಷಣಾ, ವಾಣಿಜ್ಯ ಹಾಗೂ ಆರ್ಥಿಕ ದೃಷ್ಟಿಯಿಂದ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹಿಂದಿನ ಯುಪಿಯೆ ಸರಕಾರ ತೋರಿದ ನಿರ್ಲಕ್ಷ್ಯದಿಂದಾಗಿ ಚೀನಾ ಭಾರತದ ನೆರೆಹೊರೆಯ ದೇಶಗಳಲ್ಲಿ ಆರ್ಥಿಕ, ರಕ್ಷಣಾ ಚಟುವಟಿಕೆಗಳನ್ನು ಗಣನೀಯವಾಗಿ ಹೆಚ್ಚಿಸುವುದರ ಮೂಲಕ ಭಾರತಕ್ಕೆ ಸೆಡ್ಡು ಹೊಡೆಯುವ ತನ್ನ ತಂತ್ರವನ್ನು ರೂಪಿಸತೊಡಗಿತು. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಭಾರತ ತನ್ನ ನೆರೆಹೊರೆಯ ದೇಶಗಳ ಬಗ್ಗೆ ಇದ್ದ ಉದಾಸೀನ ಧೋರಣೆಯನ್ನು ಬಿಟ್ಟು ಅವುಗಳೊಂದಿಗೆ ಬಾಂಧವ್ಯ ವೃದ್ಧಿಗೊಳಿಸುವ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.
ಈ ಧೋರಣೆಯ ಫಲವಾಗಿ ಮೋದಿಯವರು ಭೂತಾನ್. ನೇಪಾಳ ಸೇರಿದಂತೆ ಒಂದೊಂದಾಗಿ ಎಲ್ಲಾ ಸಾರ್ಕ್ ದೇಶಗಳಿಗೆ ಭೇಟಿ ನೀಡುತ್ತಿದ್ದು, ಚೀನಾದ ಪ್ರಭಾವವನ್ನು ಕುಂಠಿತಗೊಳಿಸುವುವಲ್ಲಿ ಬಹುತೇಕ ಸಫಲತೆ ಪಡೆದಿದ್ದಾರೆ.
ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅದ್ಖ್ಯಕ್ಷೀಯ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಗೆದ್ದು ಅಧಿಕಾರಕ್ಕೆ ಬಂದ ಮೈತ್ರಿಪಾಲ ಸಿರಿಸೇನ ಭಾರತದ ಪರ ಒಲವು ಹೊಂದಿದ್ದು, ಆ ದೇಶದಲ್ಲಿ ಪ್ರಭಲವಾಗಿದ್ದ ಚೀನಾದ ಆರ್ಥಿಕ ಹಾಗೂ ರಕ್ಷಣಾ ಚಟುವಟಿಕೆಗಳನ್ನು ಈಗಾಗಲೇ ಅವರು ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸಹ ಮೋದಿ ಭೇಟಿ ಅತ್ಯಂತ ಮಹತ್ವದ್ದಾಗಿದೆ. ಈ ಮೊದಲು 1987ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಭೇಟಿ ನೀಡಿದ ನಂತರ ಭಾರತದ ಪ್ರಧಾನಿ ಕಳೆದ 28 ವರ್ಷಗಳಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿರಲಿಲ್ಲ. ಕಳೆದ ಹತ್ತು ವರ್ಷಗಳಲ್ಲಂತೂ ಉಭಯ ದೇಶಗಳ ಬಾಂಧವ್ಯ ಸಾಕಷ್ಟು ಕುಸಿದಿದ್ದು, ಚೀನಾದ ಕಡೆ ವಾಲಿದ ಶ್ರೀಲಂಕಾದ ನೀತಿಗಳು ಭಾರತದ ರಕ್ಷಣಾ ಹಿತಕ್ಕೆ ಮಾರಕವಾಗಿ ಪರಿಣಮಿಸತೊಡಗಿತ್ತು.
'ನನ್ನ ಈ ಭೇಟಿ ಉಭಯ ರಾಷ್ಟ್ರಗಳ ನಡುವೆ ರಾಜಕೀಯ, ರಾಜತಾಂತ್ರಿಕ, ಆರ್ಥಿಕ, ಸಂಸ್ಕೃತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎರಡೂ ದೇಶಗಳ ಜನರ ಮಧ್ಯೆ ಸಂಪರ್ಕ ಇನ್ನಷ್ಟು ಹೆಚ್ಚುವುದಕ್ಕೆ ಒಂದು ಅವಕಾಶವಾಗುತ್ತದೆ ಎಂದು ಆಶಿಸುತ್ತೇನೆ' ಎಂದು ಪ್ರಧಾನಿ ಮೋದಿ ಶ್ರೀಲಂಕಾಕ್ಕೆ ತೆರಳುವ ಮುನ್ನ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಶ್ರೀಲಂಕಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದ್ದು, ಶ್ರೀಲಂಕಾದ ಸಂಸತ್ ನಲ್ಲಿ ಭಾಷಣ ಮಾಡುವ ಪ್ರಥಮ ಭಾರತದ ಪ್ರಧಾನಿ ಎಂಬ ಗೌರವಕ್ಕೆ ಅವರು ಭಾಜನರಾಗಲಿದ್ದಾರೆ.
ಭೇಟಿ ವೇಳೆ ಪ್ರಧಾನಿ ಮೋದಿಯವರು ಆಂತರಿಕ ಯುದ್ಧದಿಂದ ಜರ್ಜರಿತಗೊಂಡ ಉತ್ತರ ಶ್ರೀಲಂಕಾದ ಜಾಫ್ನಾಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ನಂತರ ಈ ಭಾಗಕ್ಕೆ ಭೇಟಿ ನೀಡುತ್ತಿರುವ ವಿಶ್ವದ ಎರಡನೆಯ ನಾಯಕರಾಗಿದ್ದಾರೆ. ಅಲ್ಲದೆ, ಭಾರತ ಸರಕಾರದ ಸಹಾಯದಿಂದ ನಿರ್ಮಿಸಲಾದ 20000 ಮನೆಗಳನ್ನು ಈ ಸಂದರ್ಭದಲ್ಲಿ ಪ್ರಧಾನಿ ಫಲಾನುಭವಿಗಳಿಗೆ ಹಸ್ತಾಂತರಿಸುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿಯವರ ಜೊತೆ ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಹ ಪ್ರಯಾಣಿಸಿದ್ದಾರೆ.