ಬೆಂಗಳೂರು : ಕಳೆದ 12 ದಿನಗಳಿಂದ ಕೆಮ್ಮು ಮತ್ತು ಮಧುಮೇಹ ಕಾಯಿಲೆಗೆ ತುಮಕೂರು ರಸ್ತೆ ಬಳಿ ಇರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಸಂಜೆ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ದೆಹಲಿಗೆ ತೆರಳಿದ್ದಾರೆ.
ಕೆಮ್ಮಿನ ತೊಂದರೆಯಿಂದ ಸಂಪೂರ್ಣ ಪರಿಹಾರ ಸಿಕ್ಕಿದೆ ಎಂದಿರುವ ಕೇಜ್ರಿವಾಲ್, ಸಕ್ಕರೆ ಅಂಶ ಕೂಡ ನಿಯಂತ್ರಣದಲ್ಲಿದ್ದು ಕೆಲಸಕ್ಕೆ ಹಿಂದಿರುಗಲು ಉತ್ಸುಕನಾಗಿದ್ದೇನೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಈ ಚಿಕಿತ್ಸೆಯ ೧೨ ದಿನಗಳ ಅವಧಿಯಲ್ಲಿ ಆರೋಗ್ಯ, ಸಾರ್ವಜನಿಕ ವಿತರಣಾ ಯೋಜನೆ ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಬಗ್ಗೆ ಚಿಂತಿಸಲು ಸಮಯ ಸಿಕ್ಕಿತು ಎಂದಿದ್ದಾರೆ.
"ಕೆಮ್ಮು ಹೋಯಿತು. ಸಕ್ಕರೆ ನಿಯಂತ್ರಣದಲ್ಲಿದೆ. ಆರೋಗ್ಯ ಮತ್ತು ಉಲ್ಲಸಿತ ಎಂದೆನಿಸುತ್ತಿದೆ. ಕೆಲಸಕ್ಕೆ ಹಿಂದಿರುಗಲು ಉತ್ಸುಕನಾಗಿದ್ದೇನೆ. ಜಿಂದಾಲ್ ಸಂಸ್ಥೆಗೆ ಅಭಾರಿ. ಅಲ್ಲಿನ ವೈದ್ಯರಿಗೂ ಸಿಬ್ಬಂದಿಗಳಿಗೂ. ಇಂತಹ ಅದ್ಭುತ ಸಂಸ್ಥೆ ಪ್ರಾರಂಭಿಸಿದ ಮತ್ತು ಅದನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುವ ಸೀತಾರಾಮ್ ಅವರಿಗೆ ಅಭಿನಂದನೆಗಳು" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಇಂತಹ ಸಂಸ್ಥೆಗಳು ರಾಷ್ಟ್ರದಾದ್ಯಂತ ಸ್ಥಾಪನೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಸ್ಕಾನ್ ನಡೆಸುವ ಬಿಸಿಯೂಟ ಯೋಜನೆಯನ್ನು ನೋಡುವ ಅವಕಾಶ ಸಿಕ್ಕಿತು ಮತ್ತು ಇದರಿಂದ ಸಂತಸ ಆಯಿತು ಎಂದಿರುವ ಕೇಜ್ರಿವಾಲ್ "ಕಳೆದ ೧೨ ದಿನಗಳಲ್ಲಿ ದೆಹಲಿಯಲ್ಲಿ ಏನೇನು ಬದಲಾವಣೆ ತರಬಹುದು ಎಂಬುದರ ಮೇಲೆ ಚಿಂತನೆ ನಡೆಸಿದೆ. ಅದರಲ್ಲೂ ಶಿಕ್ಷಣ ಮತ್ತು ಸಾರ್ವಜನಿಕ ವಿತರಣಾ ಯೋಜನೆಗಳ ಮೇಲೆ ಚಿಂತಿಸಿ, ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಜೊತೆ ಚರ್ಚಿಸಿ ಕೆಲವು ಪ್ರಸ್ತಾವನೆಗಳನ್ನು ಕೂಡ ಮಾಡಿದ್ದೇನೆ ಎಂದಿದ್ದಾರೆ.
ಕೇಜ್ರಿವಾಲ್ ಆರೋಗ್ಯದ ಕುರಿತಂತೆ ಸುದ್ದಿಗಾರರ ಜೊತೆ ಮಾತನಾಡಿದ ಜಿಂದಾಲ್ ಚೇರ್ ಮನ್ ಡಾ.ರಘುನಾಥ್, ಅವರ ಆರೋಗ್ಯದಲ್ಲಿ ಹೆಚ್ಚಾಗಿದ್ದ ಮಧುಮೇಹ ಸಾಮಾನ್ಯ ಪ್ರಮಾಣಕ್ಕೆ ಇಳಿದಿದೆ. ನಾವು ಯಾವುದೇ ಚಮತ್ಕಾರ ಮಾಡಿಲ್ಲ. ನ್ಯಾಚುರೋಪತಿ ಸಹಜ ಚಿಕಿತ್ಸೆ ನೀಡಿದ್ದೇವೆ ಅಷ್ಟೇ ಎಂದರು.
ಯೋಗ, ಪ್ರಾಣಾಯಾಮ ಮುಂದುವರಿಸಲು ಕೇಜ್ರಿವಾಲ್ ಅವರಿಗೆ ಸೂಚಿಸಿದ್ದೇವೆ. ತಂಪು ಪಾನೀಯ ಕುಡಿಯದಂತೆ ಸೂಚನೆ ನೀಡಲಾಗಿದೆ. ಹಳೆ ಮಾದರಿ ಆಹಾರ ಪದ್ಧತಿ ರೂಢಿಸಿಕೊಂಡ್ರೆ ಮತ್ತೆ ತೊಂದರೆ ಎಂದು ಎಚ್ಚರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.