ಬೆಂಗಳೂರು : ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಮರುದಿನವೇ ಸಿಐಡಿ ಐಜಿಪಿ ಪ್ರಣವ್ ಮೊಹಾಂತಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಖಡಕ್ ಅಧಿಕಾರಿಯೆಂದೇ ಹೆಸರು ಪಡೆದ ಪ್ರಣವ್ ಮೊಹಾಂತಿ ಅವರನ್ನು ಸಿಐಡಿ ವಿಭಾಗದಿಂದ ಲೋಕಾಯುಕ್ತಕ್ಕೆ ಸರ್ಕಾರ ವರ್ಗಾವಣೆ ಮಾಡಿರಿವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಮೊಹಾಂತಿ ಅವರಿಂದ ತೆರವಾದ ಜಾಗಕ್ಕೆ ಆಂತರಿಕ ಭದ್ರತಾ ವಿಭಾಗದ ಐಜಿಪಿ ಸಿ. ಎಚ್.ಪ್ರತಾಪ್ ರೆಡ್ಡಿ ಅವರನ್ನು ನಿಯೋಜಿಸಲಾಗಿದೆ. ರಾಜ್ಯ ಸರ್ಕಾರ ಈ ರೀತಿ ದಿಢೀರ್ ವರ್ಗಾವಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣದ ತನಿಖಾ ತಂಡದ ಉಸ್ತುವಾರಿಯನ್ನು ಪ್ರಣವ್ ಮೊಹಾಂತಿ ಅವರು ನೋಡಲಿದ್ದರು. ಹೀಗಾಗಿ ಮೂರು ದಿನಗಳಿಂದ ರಜೆಯಲ್ಲಿದ್ದ ಅವರು, ಬುಧವಾರವಷ್ಟೆ ಕರ್ತವ್ಯಕ್ಕೆ ಮರಳಿದರು. ಬೆಳಗ್ಗೆ ಕಚೇರಿಗೆ ಆಗಮಿಸಿ ಅವರು ರವಿ ಸಾವಿನ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವ ವೇಳೆಗೆ ಎತ್ತಂಗಡಿ ಆದೇಶ ಹೊರಬಿದ್ದಿದೆ. ರವಿ ಸಾವಿನ ಪ್ರಕರಣ ಮಾತ್ರವಲ್ಲದೆ ಅರ್ಕಾವತಿ ಡಿನೋಟಿಫಿಕೇಷನ್, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಬಹುಮುಖ್ಯ ಪ್ರಕರಣಗಳ ತನಿಖೆಯನ್ನು ಮೊಹಾಂತಿ ನಡೆಸುತ್ತಿದ್ದರು.
ಈ ಮೊದಲು ಲೋಕಾಯುಕ್ತದಲ್ಲಿ ಡಿಐಜಿಯಾಗಿದ್ದಾಗ ಪ್ರಣವ್ ಮೊಹಾಂತಿ ಅವರು ಅಕ್ರಮ ಗಣಿಗಾರಿಕೆ ವರದಿ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವೇಳೆ ಯಶವಂತಪುರದ ಚರ್ಚ್ ನ ರೆಕ್ಟರ್ ಕೆ.ಜೆ.ಥಾಮಸ್, ಬಿಬಿಎಂಪಿ ಸದಸ್ಯ ನಟರಾಜ್, ಆರ್ ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದ ತನಿಖೆಯನ್ನು ನಿರ್ವಹಿಸಿದ್ದರು. ಇತ್ತೀಚೆಗೆ ತೀರ್ಥಹಳ್ಳಿ ತಾಲೂಕಿನ ವಿದ್ಯಾರ್ಥಿನಿ ನಂದಿತಾ ಸಾವಿನ ಪ್ರಕರಣದ ಸತ್ಯಾಂಶದ ಪತ್ತೆ ಕಾರ್ಯ ತಂಡದ ಸಾರಥಿಯಾಗಿದ್ದವರೂ ಇವರೇ. ಪೊಲೀಸ್ ಇಲಾಖೆಯಲ್ಲಿ ಖಡಕ್ ಅಧಿಕಾರಿ ಎಂದೇ ಹೆಸರು ಮಾಡಿರುವ ಪ್ರಣವ್ ಮೊಹಾಂತಿ ಅವರ ದಿಢೀರ್ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ಅನುಮಾನಗಳಿಗೆ ಕಾರಣವಾಗಿದೆ.