ಬೆಂಗಳೂರು : ಮಾಜಿ ಸಿ.ಎಂ ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ತಮ್ಮ ಸಂಭಾಷಣೆ ಇದ್ದ ಆಡಿಯೋ ಟೇಪ್ ಬಗ್ಗೆ ಕೋಲಾರ ಶಾಸಕ ವರ್ತೂರು ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ. ಧ್ವನಿ ತಮ್ಮದೇ ಆಗಿದ್ದರೂ ಸಂಭಾಷಣೆಯನ್ನು ಎಡಿಟ್ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಆಡಿಯೋ ಟೇಪ್ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, ನಾಲ್ಕು ವರ್ಷದ ಹಿಂದೆ ತಾವು ತಹಶಿಲ್ದಾರ್ ಅವರೊಂದಿಗೆ ಮಾತುಕತೆ ನಡೆಸುವ ಸಂಭಾಷಣೆ ಇದಾಗಿದ್ದು, ಐಎಎಸ್ ಅಧಿಕಾರಿ ಡಿ.ಕೆ ರವಿ ಪ್ರಕರಣಕ್ಕೂ ಹಾಗೂ ಈ ಸಂಭಾಷಣೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮನೋಜ್ ಕುಮಾರ್ ಮೀನಾ ಅವರು ಕೋಲಾರದ ಜಿಲ್ಲಾಧಿಕಾರಿಗಳಾಗಿದ್ದಾಗ ತಾವು ತಹಶೀಲ್ದಾರ್ ಗೆ ಧಮ್ಕಿ ಹಾಕಿದ್ದು ನಿಜ ಎಂದು ಹೇಳಿದ್ದಾರೆ.
ಡಿ.ಕೆ ರವಿ ತಮಗೆ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು, ಅವರ ವರ್ಗಾವಣೆಗೂ ಈ ಆಡಿಯೋ ಕ್ಲಿಪ್ ಗೂ ಸಂಬಂಧವಿಲ್ಲ. ಕುಮಾರಸ್ವಾಮಿ ಅವರು ಈ ಸಂಭಾಷಣೆಯ ಆಡಿಯೋ ಟೇಪ್ ಗಳನ್ನು ಬಳಸಿಕೊಂಡು ಚೆಲ್ಲಾಟ ಆಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದವರು ತಮ್ಮನ್ನು ಪ್ರಶ್ನಿಸುವ ಬದಲು ಆಡಿಯೋ ಟೇಪ್ ಬಿಡುಗಡೆ ಮಾಡಿರುವ ಕುಮಾರಸ್ವಾಮಿ ಅವರನ್ನೇ ಪ್ರಶ್ನಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಪರವಾನಗಿ ಇದ್ದ ಲಾರಿಗಳನ್ನೂ ಜಪ್ತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆ ರೀತಿ ಧಮ್ಕಿ ಹಾಕಬೇಕಾದ ಅನಿವಾರ್ಯತೆ ಇತ್ತು ಎಂದು ವರ್ತೂರು ಪ್ರಕಾಶ್ ಅವರು ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮದವರು ವರ್ತೂರು ಪ್ರಕಾಶ್ ಅವರಿಗೆ ಮತ್ತಷ್ಟು ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಲಾಗದೇ ಕರೆಯನ್ನು ಮೊಟಕುಗೊಳಿಸಿದ್ದಾರೆ.