ಜಮ್ಮು-ಕಾಶ್ಮೀರ : ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪದೇ ಪದೇ ವಿವಾದಗಳನ್ನು ಸೃಷ್ಟಿಸುತ್ತಿರುವ ಜಮ್ಮು-ಕಾಶ್ಮೀರ ಸಿ.ಎಂ ಮುಫ್ತಿ ಮೊಹಮದ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಮುಫ್ತಿ ಮೊಹಮದ್ ಅವರದ್ದು ಗರಿಷ್ಠ ಸರ್ಕಸ್ ಹಾಗೂ ಕನಿಷ್ಠ ಆಡಳಿತ ಎಂದು ವ್ಯಂಗ್ಯವಾಡಿದೆ.
ಮುಫ್ತಿ ಆಡಳಿತದಿಂದ ರಾಜ್ಯದ ಜನತೆ ಅಸಮಾಧಾನಗೊಂಡಿದ್ದಾರೆ. ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಸರ್ಕಾರ ರಚನೆಗಾಗಿ 2 ತಿಂಗಳು ಕಾದಿದ್ದು ವ್ಯರ್ಥವಾಗಿದೆ ಎಂದು ಜಮ್ಮು-ಕಾಶ್ಮೀರದ ಜನತೆ ಆಕ್ರೋಶಗೊಂಡಿದ್ದಾರೆ. ಬಿಜೆಪಿ-ಪಿಡಿಪಿ ನಡುವೆ ಸಮನ್ವಯದ ಕೊರತೆ ಇದೆ ಎಂದು ಜಮ್ಮು-ಕಾಶ್ಮೀರ ಕಾಂಗ್ರೆಸ್ ನಾಯಕ ನವಾಂಗ್ ರಿಗ್ಜಿನ್ ಜೋರಾ ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಸರ್ಕಾರ ರಚನೆಯಾದಾಗ ರಾಜ್ಯದಲ್ಲಿ ಅದ್ಭುತಗಳು ಘಟಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜನರ ನಿರೀಕ್ಷೆಗಳನ್ನು ಉಭಯ ಪಕ್ಷಗಳೂ ಸುಳ್ಳುಮಾಡಿವೆ ಎಂದು ಜೋರಾ ಆರೋಪಿಸಿದ್ದಾರೆ.
ಪ್ರತ್ಯೇಕತಾವಾದಿಗಳ ಬಗ್ಗೆ ಪಿಡಿಪಿ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ. ಮತ್ತೊಂದೆಡೆ ಹಿಂದುತ್ವದ ಅಜೆಂಡಾ ಬಿಡಲು ಬಿಜೆಪಿ ಸಿದ್ಧವಿಲ್ಲ. ಎರಡೂ ಪಕ್ಷಗಳ ಸಿದ್ಧಾಂತ ವಿರುದ್ಧವಾಗಿರುವುದರಿಂದ ಬಿಜೆಪಿ-ಪಿಡಿಪಿ ನಡುವೆ ಸಮನ್ವಯದ ಕೊರತೆ ಎದುರಾಗಿದೆ. ಆದ್ದರಿಂದ ಇದು ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದ ಬದಲು, ಗರಿಷ್ಠ ಸರ್ಕಸ್ ಹಾಗೂ ಕನಿಷ್ಠ ಆಡಳಿತ ಎಂದು ನವಾಂಗ್ ರಿಗ್ಜಿನ್ ಜೋರಾ ಹೇಳಿದ್ದಾರೆ.