BW News Bureau : ಬೆಂಗಳೂರನ್ನು ಕಾಡುತ್ತಿರುವ ಜಾಹೀರಾತು ಮಾಫಿಯಾಕ್ಕೆ ಕಡಿವಾಣ ಹಾಕಲು ಜಾಹೀರಾತು ನೀತಿ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾ.26ರ ಅಧಿವೇಶನದ ವಿಧಾನ ಪರಿಷತ್ ಕಲಾಪದಲ್ಲಿ ಜಾಹೀರಾತು ಮಾಹಿಫಾ ಬಗ್ಗೆ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೆಂಗಳೂರಿನಲ್ಲಿ ದೊಡ್ಡ ಜಾಹೀರಾತು ಮಾಫಿಯಾ ಇರುವುದರಿಂದ ಸರ್ಕಾರಕ್ಕೆ ಪ್ರತಿವರ್ಷ ನೂರಾರು ಕೋಟಿ ನಷ್ಟವಾಗುತ್ತಿದೆ ಎಂದು ಸಿ.ಎಂ ತಿಳಿಸಿದ್ದಾರೆ.
ಸರ್ಕಾರಕ್ಕೆ ಉಂಟಾಗುತ್ತಿರುವ ನಷ್ಟವನ್ನು ತಡೆಗಟ್ಟಲು 2006ರ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಜಾಹೀರಾತು ನೀತಿಯನ್ನು ಜಾರಿ ಮಾಡಲಾಗುವುದು ಎಂದು ಸಿ.ಎಂ ತಿಳಿಸಿದ್ದಾರೆ. ನಗರದ ಸೌಂದರ್ಯ ಹಾಳಾಗದಂತೆ ಹಾಗೂ ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ಹಾಲಿ ಇರುವ ಅಧಿಕೃತ ಮತ್ತು ಅನಧಿಕೃತ ಜಾಹೀರಾತುಗಳನ್ನು ತೆರವು ಮಾಡಲಾಗುವುದು ಎಂದು ಹೇಳಿದ್ದಾರೆ. ಒಂದು ವೇಳೆ ತೆರವುಗೊಳಿಸಲು ಹಿಂದೇಟು ಹಾಕಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಸಿಎಂ ಎಚ್ಚರಿಸಿದ್ದಾರೆ.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ವೈ.ಎ.ನಾರಾಯಣಸ್ವಾಮಿ ಜಾಹೀರಾತು ಮಾಫಿಯಾ ನಗರದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. 21 ಸಾವಿರ ಅನಧಿಕೃತ ಜಾಹೀರಾತು ಫಲಕಗಳಿವೆ. ಪಾಲಿಕೆಗೆ ತೆರಿಗೆಯನ್ನು ಕಟ್ಟದೆ ವಂಚನೆ ಮಾಡುತ್ತಿದ್ದಾರೆ. ವಾರ್ಷಿಕ ಎರಡು ಸಾವಿರ ಕೋಟಿ ತೆರಿಗೆಯನ್ನು ಇದರಿಂದ ವಸೂಲಿ ಮಾಡಬಹುದಾಗಿದೆ ಎಂದು ಹೇಳಿದರು.