ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಗಳು ತಾರಕ್ಕಕ್ಕೆ ಏರಿವೆ. ಕೆಲ ದಿನಗಳ ಹಿಂದೆ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದ ವಿರೋಧಿ ಬಣಗಳು ಇದೀಗ ಆಮ್ ಆದ್ಮಿ ಪಕ್ಷವನ್ನೇ ತೊರೆದು ಹೊಸ ಪಕ್ಷ ಕಟ್ಟುತ್ತೇನೆಂದು ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿರುವ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿವೆ.
ಬೆದರಿಕೆಯ ಧಾಟಿಯಲ್ಲಿ ಕೇಜ್ರಿವಾಲ್ ಆಡಿರುವ ಮಾತಿನ ವಿವರಗಳು "ಗುಪ್ತ ಕಾರ್ಯಾ ಚರಣೆ'ಯಲ್ಲಿ ಬಹಿರಂಗಗೊಂಡಿದೆ.
ಶನಿವಾರ ನಡೆಯಲಿರುವ ಆಮ್ ಆದ್ಮಿ ಪಕ್ಷದ ಮಹತ್ವದ ರಾಷ್ಟ್ರೀಯ ಕಾರ್ಯಕಾರಿಣಿ ಪರಿಷತ್ತಿನ ಸಭೆಯ ಮುನ್ನಾ ದಿನ ಈ ಸ್ಟಿಂಗ್ ಆಪರೇಶನ್ ಆಡಿಯೋ ಬಿಡುಗಡೆಯಾಗಿರುವುದು ಎರಡೂ ಬಣಗಳ ನಡುವಿನ ಸಮರದ ತೀವ್ರತೆಯನ್ನು ತೋರಿಸಿದೆ. ಗುಪ್ತ ಕಾರ್ಯಾಚರಣೆಯ ಆಡಿಯೋದಲ್ಲಿ ಕೇಜ್ರಿವಾಲ್, "ನಾನು 67 ಶಾಸಕರೊಂದಿಗೆ ಆಪ್ ನಿಂದಲೇ ಹೊರ ಹೋಗುವೆ. ಬೇರೆ ಪಕ್ಷ ಕಟ್ಟುವೆ' ಎಂದು ವಾರಾಣಸಿಯ ಆಪ್ ಮುಖಂಡ ಉಮೇಶ್ ಸಿಂಗ್ ಜತೆ ಮಾತನಾಡುತ್ತ ಹೇಳುತ್ತಾರೆ. ಅಲ್ಲದೆ, ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ರನ್ನು ಮನಬಂದಂತೆ ನಿಂದಿಸುವ ಕೇಜ್ರಿವಾಲ್ "ಬೇರೆ ಪಕ್ಷದಲ್ಲಾಗಿದ್ದರೆ ಇಂಥವರನ್ನು ಒದ್ದು ಓಡಿಸುತ್ತಿದ್ದರು' ಎಂದು ಹೇಳಿದ್ದಾರೆ. ಈ ಕುರಿತ ಆಡಿಯೋ ಟೇಪ್ ಗಳು ್ಮಾಧ್ಯಮ ಕಚೇರಿಗಳಿಗೆ ತಲುಪಿವೆ.
ಈ ಬಗ್ಗೆ ಕೇಜ್ರಿವಾಲ್ ಬಣದ ಮೂಲಗಳನ್ನು ಪ್ರಶ್ನಿಸಿದಾಗ ಅವರು ಈ ಸಂಭಾಷಣೆ ನಡೆದಿರುವುದನ್ನು ಖಚಿತಪಡಿಸಿದ್ದು, "ಸಿಟ್ಟಿನ ಭರದಲ್ಲಿ ಈ ಮಾತುಗಳನ್ನು ಆಡಿದ್ದಾರೆ' ಎಂದಿವೆ. ಪ್ರಶಾಂತ್ ಭೂಷಣ್ ಕೂಡ, "ಇದು ನನ್ನ ಗಮನಕ್ಕೆ ಬಂದಿದೆ' ಎಂದು ಹೇಳಿದ್ದಾರೆ. ಶನಿವಾರದ ಸಭೆಯಲ್ಲಿ ಇದು ಭಾರೀ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.