ಬೆಂಗಳೂರು : ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಕೆಲವರು ರಾಜಕೀಯ ಭಾಷಣ ಮಾಡಿದ್ದಾರೆ, ಕೆಲವರು ಬೂಸಾ ಬಜೆಟ್ ಎಂದು ಹೇಳಿದ್ದಾರೆ. ಎಲ್ಲಾ ಟೀಕೆಗಳನ್ನು ಸಮಚಿತ್ತದಿಂದ ಸ್ವೀಕರಿಸುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಅವರು, ಬೂಸಾ ಬಜೆಟ್ ಎಂದು ಹೇಳಿದ್ದು ಸರಿಯಲ್ಲ. ಈ ಪದವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಪ್ರಸಕ್ತ ಸಾಲಿನ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದ್ದ ವೇಳೆ ಕುಮಾರಸ್ವಾಮಿ ಮಾತನಾಡುತ್ತ, ಈ ಹಿಂದೆ ಸಿದ್ದರಾಮಯ್ಯನವರು ಪದ್ಮನಾಭನಗರದಿಂದ(ಎಚ್.ಡಿ.ದೇವೇಗೌಡ) ಸಲಹೆ ಪಡೆದು ಬಜೆಟ್ ಮಂಡಿಸುತ್ತಿದ್ದರು. ಹಾಗಾಗಿ ಅವೆಲ್ಲ ಉತ್ತಮ ಬಜೆಟ್ ಆಗಿತ್ತು. ಆದರೆ ಈ ಬಾರಿ ಸಿದ್ದರಾಮಯ್ಯನವರು ಬೂಸಾ ಬಜೆಟ್ ಮಂಡಿಸಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದರು.
ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯೆ ಎಂಬಂತೆ ಕಲಾಪದಲ್ಲಿ ಸುಮಾರು 3 ಗಂಟೆಗಳ ಕಾಲ ಮಾತನಾಡಿದ ಸಿದ್ದರಾಮಯ್ಯ, ಪರೋಕ್ಷವಾಗಿ ಟಾಂಗ್ ನೀಡುವ ಮೂಲಕ ಇಬ್ಬರ ನಡುವೆಯೂ ವಾಕ್ಸಮರಕ್ಕೆ ಕಾರಣವಾಯಿತು.
ನನಗೆ ಸಿಎಂ ಹುದ್ದೆ ತಪ್ಪಿಸಿರುವ ಬಗ್ಗೆ ಎಲ್ಲಾ ಮಾಹಿತಿ ಇದೆ. ಅಷ್ಟೇ ಅಲ್ಲ ಜೆ.ಎಚ್ ಪಟೇಲರು ಮುಖ್ಯಮಂತ್ರಿಯಾದ ಸಂದರ್ಭದಲ್ಲೂ ಯಾರು, ಹೇಗೆ ನನಗೆ ಸಿಎಂ ಹುದ್ದೆ ತಪ್ಪಿಸಿದ್ದಾರೆ ಎಂಬುದು ಗೊತ್ತು. ಈ ಬಗ್ಗೆ ಸೋನಿಯಾ ಗಾಂಧಿ, ಶರದ್ ಪವಾರ್ ಗೂ ಗೊತ್ತು. ಎಂ.ಪಿ.ಪ್ರಕಾಶ್ ನಿಧನರಾಗಿದ್ದಾರೆ, ಹಾಗಾಗಿ ಇನ್ನುಳಿದರೆಲ್ಲಾ ಜೀವಂತವಾಗಿದ್ದೇವೆ. ಪಿ.ಜಿ.ಆರ್.ಸಿಂಧ್ಯಾ, ಎಂಸಿ ನಾಣಯ್ಯ, ಶರದ್ ಪವಾರ್, ಸೋನಿಯಾಗಾಂಧಿ ಬಳಿಯೇ ಹೋಗಿ ಸಿಎಂ ಹುದ್ದೆ ತಪ್ಪಿಸಿದ ವಿಚಾರವಾಗಿ ಚರ್ಚಿಸುವ ಬನ್ನಿ ಎಂದು ಸಿದ್ದರಾಮಯ್ಯ ಕುಮಾರಸ್ವಾಮಿಗೆ ಸವಾಲು ಹಾಕಿದರು.
ನಾನೇನು ನಿಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿಲ್ಲ, ಕಾಂಗ್ರೆಸ್ ನವರಿಂದಲೇ ನಿಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದೆ ಎಂದು ಕುಮಾರಸ್ವಾಮಿ ಸಮಜಾಯಿಸಿ ನೀಡಿದರು.