ನವದೆಹಲಿ : ಆಮ್ ಆದ್ಮಿ ಪಕ್ಷದ ಶಾಸಕರು ಬಿಜೆಪಿ ಹೆಸರಲ್ಲಿ ನಕಲಿ ದೂರವಾಣಿ ಕರೆ ಮಾಡುತ್ತಿದ್ದು, ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮತಿಯೂ ಇದ್ದಿರುವುದಾಗಿ ಎಎಪಿ ಮಾಜಿ ಶಾಸಕ ರಾಜೇಶ್ ಗಾರ್ಗ್ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಸರ್ಕಾರ ರಚನೆಯ ಕಸರತ್ತಿನ ವೇಳೆ, ಸಾರಿಗೆ ಸಚಿವ ನಿತೀನ್ ಗಡ್ಕರಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಹೆಸರು ಹೇಳಿಕೊಂಡು ನಕಲಿ ಕರೆ ಮಾಡಿ, ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವಂತೆ ಹೇಳುತ್ತಿದ್ದಾರೆ.
ಅಲ್ಲದೇ ಬಿಜೆಪಿಯನ್ನು ಬೆಂಬಲಿಸಿದರೆ ಹತ್ತು ಕೋಟಿ ರೂಪಾಯಿ ನೀಡುವುದಾಗಿಯೂ ಆಮಿಷ ಒಡ್ಡಿರುವುದಾಗಿ ಗಾರ್ಗ್ ಬಾಂಬ್ ಸಿಡಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಒಪ್ಪಿಗೆ ಮೇರೆಗೆ ಖಾಸಗಿ ನಂಬರ್ ಗಳಿಂದ ಆಪ್ ಶಾಸಕರು ಈ ರೀತಿ ನಕಲಿ ಕರೆ ಮಾಡುತ್ತಿದ್ದಾರೆ. ಈ ಕರೆ ಮಾಡುತ್ತಿರುವುದು ನಿಜಕ್ಕೂ ಬಿಜೆಪಿಯಲ್ಲ, ಅವರೆಲ್ಲರೂ ಕೇಜ್ರಿವಾಲ್ ಬೆಂಬಲಿಗರು. ಇದಕ್ಕೆ ಬೇಕಾದ ದಾಖಲೆ ತಮ್ಮ ಬಳಿ ಇದ್ದಿರುವುದಾಗಿ ಹೇಳಿದ್ದಾರೆ.