ಬೆಂಗಳೂರು : ಅದಿರು ಲೂಟಿಯಾಗಿದ್ದು ನಮ್ಮ ಅವಧಿಯಲ್ಲಿ ಅಲ್ಲ, ಬಿಜೆಪಿ ಅವಧಿಯಲ್ಲಿ ಗಣಿ ಸಂಪತ್ತು ಲೂಟಿಯಾಗಿದೆ. ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಪರಿಷತ್ ನ ಕೊನೆಯ ದಿನದ ಕಲಾಪದಲ್ಲಿ ಮಾತನಾಡಿದ ಅವರು, ಅಕ್ರಮ ಗಣಿ ವಿಷಯದಲ್ಲಿ ರಾಜ್ಯ ಮರ್ಯಾದೆ ಹರಾಜಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ ರೀತಿ ಬೇರೆಯವರು ಕನ್ ಫ್ಯೂಸ್ ಆಗುವುದು ಬೇಡ ಎಂದರು.
ಸಿ ಕೆಟಗರಿಯಲ್ಲಿ 15 ಗಣಿ ಕಂಪನಿಗಳು ಇವೆ. ಅದರಲ್ಲಿ ಆರು ಕಂಪನಿಗಳ ಬಗ್ಗೆ ಕೋರ್ಟ್ ಗೆ ಮಾಹಿತಿ ಕೊಟ್ಟಿದ್ದೇವೆ. 9 ಕಂಪನಿಗಳ ಬಗ್ಗೆ ಮಾಹಿತಿ ಇಲ್ಲ. ಯಾಕೆಂದರೆ ಅದಿರು ಪ್ರಮಾಣ ಮತ್ತು ಗುಣಮಟ್ಟ ಪರೀಕ್ಷಿಸುವ (ಎಂಇಪಿಎಲ್) ಸಂಸ್ಥೆಗೆ ರಾಜ್ಯ ಸರ್ಕಾರ ಈಗಾಗಲೇ 60 ಕೋಟಿ ರೂಪಾಯಿ ಪಾವತಿ ಮಾಡಿದೆ. ಜೂನ್ ಅಂತ್ಯಕ್ಕೆ ಮಾಹಿತಿ ನೀಡುವುದಾಗಿ ಸಂಸ್ಥೆ ಹೇಳಿದೆ ಎಂದು ಹೇಳಿದರು.
ಈಶ್ವರಪ್ಪನವರ ರೀತಿ ಬೇರೆಯವರು ಗೊಂದಲಕ್ಕೀಡಾಗಬಾರದು ಅಂತ ಮಾಹಿತಿ ನೀಡುತ್ತಿದ್ದೇನೆ. ಯಾರು ಜೈಲಿಗೆ ಹೋಗಿದ್ದಾರೆ, ಯಾರ ಮರ್ಯಾದೆ ಹೋಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.
ಅದಿರು ಎಷ್ಟಿದೆ, ಗುಣಮಟ್ಟದ ಬಗ್ಗೆ ಮಾಹಿತಿ ಇದೆ. ಗಣಿ ಹರಾಜಿಗೆ ಇರುವ ಅಡ್ಡಿ ಆತಂಕದ ಬಗ್ಗೆ ಕೋರ್ಟ್ ಪ್ರಶ್ನಿಸಿದೆ. ಆ ಬಗ್ಗೆ ಎಲ್ಲಾ ಮಾಹಿತಿಯನ್ನು ಕೋರ್ಟ್ ಗೆ ಒದಗಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾತಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕೋಲಾಹಲ ನಡೆಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಮೇಲ್ಮನೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ರಾಷ್ಟ್ರಗೀತೆಯೊಂದಿಗೆ ವಿಧಾನಪರಿಷತ್ ಕಲಾಪ ಮುಕ್ತಾಯಗೊಂಡಿತು.