ನವದೆಹಲಿ : 'ಆಮ್ ಆದ್ಮಿ ಪಕ್ಷ'ಕ್ಕೆ ಒಂದಲ್ಲಾ ಒಂದು ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಇಷ್ಟು ದಿನ ಆಂತರಿಕ ಭಿನ್ನಮತದಿಂದ ಬಳಲಿದ್ದ ಆಪ್ ಗೆ ಈಗ ದೇಣಿಗೆ ನೀಡಿದವರ ಕಾಟ ಪ್ರಾರಂಭವಾಗಿದೆ.
ಕೇಜ್ರಿವಾಲ್ ಗೆ ವ್ಯಾಗನಾರ್ ಕಾರನ್ನು ದೇಣಿಗೆ ನೀಡಿದ್ದ ಆಪ್ ಬೆಂಬಲಿಗನೊಬ್ಬ ತನ್ನ ಕಾರು ತನಗೆ ವಾಪಸ್ ಬೇಕು ಎಂಬ ಬೇಡಿಕೆ ಇಟ್ಟಿದ್ದ. ಇದಾದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಲೋಗೊಗೆ ಕುತ್ತು ಬಂದಿದೆ!. ಸುನಿಲ್ ಲಾಲ್ ಎಂಬ ವ್ಯಕ್ತಿ ಆಮ್ ಆದ್ಮಿ ಪಕ್ಷದ ಲೋಗೊ ವಾಪಸ್ ನೀಡಬೇಕೆಂದು ಆಗ್ರಹಿಸಿದ್ದಾರೆ.
ಎಎಪಿ ಲೋಗೋವನ್ನು ಡಿಸೈನ್ ಮಾಡಿದ್ದು ನಾನೇ ಆದ್ದರಿಂದ ಆಮ್ ಆದ್ಮಿ ಪಕ್ಷ ಇನ್ಮುಂದೆ ಹ್ಯಾಂಡ್ ಬಿಲ್, ಫ್ಲ್ಯಾಗ್, ಫೋಸ್ಟರ್, ವೆಬ್ ಸೈಟ್ ಸೇರಿದಂತೆ ಯಾವುದರಲ್ಲೂ ತನ್ನ ಲೋಗೊವನ್ನು ಉಪಯೋಗಿಸುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ. ಪಕ್ಷದ ಲೋಗೊ ನನ್ನ ಭೌದ್ಧಿಕ ಆಸ್ತಿಯ ಹಕ್ಕು. ಅದನ್ನು ನಾನು ಯಾವತ್ತೂ ಪಕ್ಷಕ್ಕೆ ವರ್ಗಾಯಿಸಿಲ್ಲ. ಆ ಕಾರಣದಿಂದ ಲೋಗೊವನ್ನು ಉಪಯೋಗಿಸುವುದನ್ನು ಎಎಪಿ ಕೂಡಲೇ ನಿಲ್ಲಿಸಬೇಕೆಂದು ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗೆ ಸುನಿಲ್ ಲಾಲ್ ಪತ್ರ ಬರೆದಿದ್ದಾರೆ.
ಇದೇ ವೇಳೆ ತಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದು, ರಾಜೀನಾಮೆಯನ್ನು ಸ್ವೀಕರಿಸಬೇಕೆಂದು ಸುನಿಲ್ ಲಾಲ್ ಮನವಿ ಮಾಡಿಕೊಂಡಿದ್ದಾರೆ. ಎಎಪಿ ಜನರ ಭಾವನೆಗೆ ನೋವನ್ನುಂಟು ಮಾಡಿದೆ. ಹಾಗೂ ಜನರ ನಿರೀಕ್ಷೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಲಾಲ್ ಆರೋಪಿಸಿದ್ದಾರೆ.
ಪಕ್ಷದಲ್ಲಿ ಆಂತರಿಕ ಭಿನ್ನಮತ ಉಂಟಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅನಿವಾಸಿ ಭಾರತೀಯ ಕುಂದನ್ ಶರ್ಮಾ, ತಾವು ದೇಣಿಗೆಯಾಗಿ ನೀಡಿದ್ದ ವ್ಯಾಗನಾರ್ ಕಾರನ್ನು ವಾಪಸ್ ಕೊಡುವಂತೆ ಅರವಿಂದ್ ಕೇಜ್ರಿವಾಲ್ ಗೆ ಮನವಿ ಮಾಡಿದ್ದರು.