ಲಖ್ನೌ : 'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ವಿರುದ್ಧವಾಗಿ ಧ್ವನಿ ಎತ್ತಿದ್ದ ಆಜಂ ಖಾನ್ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಬರೊಬ್ಬರಿ 800 ಜನರು ಇಸ್ಲಾಮ್ ಗೆ ಮತಾಂತರಗೊಂಡಿದ್ದಾರೆ.
ತಮ್ಮ ಮನೆಗಳು ನಿರ್ನಾಮಗೊಳ್ಳುವುದನ್ನು ತಡೆಯಲು ವಾಲ್ಮೀಕಿ ಜನಾಂಗದವರು ಬೇರೆ ದಾರಿ ಇಲ್ಲದೇ ಇಸ್ಲಾಮ್ ಗೆ ಮತಾಂತರಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಮನೆಗಳಿರುವ ಪ್ರದೇಶದಲ್ಲಿ ಮಾಲ್ ನಿರ್ಮಾಣ ಮಾಡಲು ಪ್ರಭಾವಿ ರಾಜಕಾರಣಿಯೋರ್ವ ಯತ್ನಿಸುತ್ತಿದ್ದಾರೆ. ಇದಕ್ಕಾಗಿ ತಮ್ಮ ಮನೆಗಳು ನಿರ್ನಾಮಗೊಳ್ಳುವ ಸಾಧ್ಯತೆ ಇದ್ದು, ಇಸ್ಲಾಮ್ ಗೆ ಮತಾಂತರಗೊಂಡರೆ ತಮ್ಮ ಮನೆಗಳನ್ನು ಉಳಿಸಿಕೊಳ್ಳಬಹುದೆಂದು ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರದಲ್ಲಿ ಮತಾಂತರಗೊಂಡ ವಾಲ್ಮೀಕಿ ಜನಾಂಗದವರು ಸ್ಪಷ್ಟಪಡಿಸಿದ್ದಾರೆ.
ವಾಲ್ಮೀಕಿಗಳು ಮತಾಂತರಗೊಂಡಿರುವ ಪ್ರದೇಶವನ್ನು ಉತ್ತರ ಪ್ರದೇಶ ಸಚಿವ ಆಜಂ ಖಾನ್ ಪ್ರತಿನಿಧಿಸುತ್ತಿದ್ದಾರೆ. ತಮ್ಮ ಮನೆಗಳನ್ನು ತೆರವುಗೊಳಿಸುವುದರ ವಿರುದ್ಧ ವಾಲ್ಮೀಕಿಗಳು ಏ.8ರಂದು ಪ್ರತಿಭಟನೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಮನೆ ಉಳಿಸಿಕೊಳ್ಳಲು ಇಸ್ಲಾಮ್ ಗೆ ಮತಾಂತರಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಜಂ ಖಾನ್ ಮಾಧ್ಯಮ ಕಾರ್ಯದರ್ಶಿ, ಇಸ್ಲಾಮ್ ಗೆ ಮತಾಂತರವಾಗುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ. ಯಾವುದೇ ಧರ್ಮದವರಾಗಿದ್ದರೂ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.