ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪಿಡಿಪಿ ನೇತೃತ್ವದ ಸರ್ಕಾರ, ಪ್ರತ್ಯೇಕತಾವಾದಿಗಳ ಬಗ್ಗೆ ಮೃಧುತೋರಣೆ ತೋರುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ರಾಜ್ಯದ ರಾಜಧಾನಿ ಶ್ರೀನಗರದಲ್ಲಿ ಪಾಕಿಸ್ತಾನ ಧ್ವಜ ಪ್ರದರ್ಶಿಸಲಾಗಿದೆ. ಜೊತೆಗೆ ಭಾರತ ವಿರೋಧಿ ಘೋಷಣೆಗಳು ಎಗ್ಗಿಲ್ಲದೆಯೇ ಮೊಳಗಿವೆ.
ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಶಾ ಗಿಲಾನಿ 5 ವರ್ಷಗಳ ಬಳಿಕ ಶ್ರೀನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರ್ಯಾಲಿ ವೇಳೆ, ಹಲವು ದೇಶದ್ರೋಹಿಗಳು, ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ದೇಶ ವಿರೋಧಿ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.
ಈ ಗುಂಪಿನ ನೇತೃತ್ವವನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ಮಸರತ್ ಆಲಂ ವಹಿಸಿದ್ದ. ಈ ಭಾರತ ವಿರೋಧಿ ಕೃತ್ಯವು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಪಿಡಿಪಿ ಜೊತೆ ಸರ್ಕಾರದಲ್ಲಿ ಪಾಲುದಾರನಾಗಿರುವ ಬಿಜೆಪಿ, ಘಟನೆಯನ್ನು ತೀವ್ರವಾಗಿ ಖಂಡಿಸಿದೆ.
ಈ ನಡುವೆ ರ್ಯಾಲಿ ವೇಳೆ ದೇಶ ವಿರೋಧಿ ಹೇಳಿಕೆ ನೀಡಿದ ಆರೋಪಕ್ಕಾಗಿ ಗಿಲಾನಿ ಮತ್ತು ಆಲಂ ವಿರುದ್ಧ ಶ್ರೀನಗರ ಪೊಲೀಸರು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಿಲಾನಿ ಪ್ರಚೋದನೆಯ ಹಿನ್ನೆಲೆಯಲ್ಲಿ 2010ರಲ್ಲಿ ಶ್ರೀನಗರದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಇದರಲ್ಲಿ 100ಕ್ಕೂ ಹೆಚ್ಚು ಯುವಕರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಗಿಲಾನಿಗೆ ಶ್ರೀನಗರದಲ್ಲಿ ಸಾರ್ವಜನಿಕ ರ್ಯಾಲಿ ನಡೆಸಲು ಸರ್ಕಾರ ಅವಕಾಶ ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಪಿಡಿಪಿ ಸರ್ಕಾರ, 5 ವರ್ಷದ ಬಳಿಕ ಗಿಲಾನಿಗೆ ಶ್ರೀನಗರದಲ್ಲಿ ರ್ಯಾಲಿಗೆ ಅನುಮತಿ ನೀಡಿತ್ತು.
ರ್ಯಾಲಿಗೆ ಆಗಮಿಸಿದ್ದ ಗಿಲಾನಿಗೆ ಅದ್ಧೂರಿ ಸ್ವಾಗತ ಕೋರಿದ ಪ್ರತ್ಯೇಕತಾವಾದಿ ನೀತಿ ಪ್ರತಿಪಾದಕರು, ರ್ಯಾಲಿಯುದ್ದಕ್ಕೂ ಹಲವು ಬಾರಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಿದರು. ಜೊತೆಗೆ ಭಾರತ ವಿರೋಧಿ, ಪಾಕ್ ಪರ ಘೋಷಣೆಗಳನ್ನು ಕೂಗಿದರು.
ರ್ಯಾಲಿ ವೇಳೆ ಸಮೀಪದಲ್ಲೇ ಇದ್ದ ಸಿ.ಆರ್.ಪಿ.ಎಫ್ ವಾಹನಗಳ ಮೇಲೆ ಕಲ್ಲನ್ನೂ ತೂರಲಾಯಿತು. ಆದರೆ ಸಿ.ಆರ್.ಪಿ.ಎಫ್ ಸಿಬ್ಬಂದಿ ಸಂಯಮದ ವರ್ತನೆ ತೋರಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ.