ಬೆಂಗಳೂರು : ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕದ ಕಡ್ಡಾಯ ಮತದಾನ ಅಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸೂಕ್ತ ಸ್ಪಷ್ಟನೆ ನೀಡುವಂತೆ ರಾಜ್ಯಪಾಲ ವಿ.ಆರ್.ವಾಲಾ ಸರ್ಕಾರಕ್ಕೆ ಸೂಚಿಸಿದ್ದರು. ಇದೀಗ ಸರ್ಕಾರ ಕಳುಹಿಸಿದ್ದ ಸ್ಪಷ್ಟನೆಗೆ ರಾಜ್ಯಪಾಲರು ಮತ್ತೆ ಆಕ್ಷೇಪ ವ್ಯಕ್ತಪಡಿಸಿ ಕಾನೂನಾತ್ಮಕ ಉತ್ತರ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ರಾಜ್ಯಪಾಲರ ಆಕ್ಷೇಪಕ್ಕೆ ಪಂಚಾಯತ್ ರಾಜ್ ಸಚಿವ ಹೆಚ್.ಕೆ.ಪಾಟೀಲ್ ರಾಜ್ಯಪಾಲರಿಗೆ ಉತ್ತರ ಕಳುಹಿಸಿ ಕೊಟ್ಟಿದ್ದರು. ಆದರೆ ರಾಜ್ಯ ಸರ್ಕಾರ ನೀಡಿರುವ ಉತ್ತರ ರಾಜಕೀಯ ದೃಷ್ಟಿಕೋನ ಹೊಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಡ್ವೊಕೇಟ್ ಜನರಲ್ ಮೂಲಕ ಕಾನೂನಾತ್ಮಕ ಉತ್ತರ ನೀಡುವಂತೆ ರಾಜ್ಯಪಾಲರು ಮತ್ತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರು.
ವಿಧೇಯಕದ ಕುರಿತು ಹಲವು ಆಕ್ಷೇಪ ಎತ್ತಿರುವ ರಾಜ್ಯಪಾಲರು ಮತದಾನವನ್ನು ಕಡ್ಡಾಯಗೊಳಿಸುವುದು ಸಂವಿಧಾನದ ಪರಿಚ್ಛೇದ 19 (ಎ) (1) ಗೆ ವಿರುದ್ಧವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದತ್ತ ಹಕ್ಕು. ಮತದಾನ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುತ್ತದೆ. ಮತದಾನ ಮಾಡುವುದು ಅಥವಾ ಬಿಡುವುದು ವ್ಯಕ್ತಿಯ ವಿವೇಚನೆ ಮತ್ತು ನಿರ್ಧಾರಕ್ಕೆ ಬಿಟ್ಟಿದ್ದು. ಹೀಗಿರುವಾಗ ಮತದಾನವನ್ನು ಕಡ್ಡಾಯಗೊಳಿಸುವುದು ಸಮಂಜಸವೇ ಎಂದು ಪ್ರಶ್ನಿಸಿದ್ದರು.
ಅಲ್ಲದೇ, ಮತದಾನ ಮಾಡದವರಿಗೆ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ವಿಧೇಯಕದಲ್ಲಿ ವಿವರಣೆ ಇಲ್ಲ. ಸಾಮಾನ್ಯವಾಗಿ ಚುನಾವಣೆಗಳಲ್ಲಿ ಗರಿಷ್ಠ ಶೇ.80 ರಷ್ಟು ಮತದಾನ ಆಗುತ್ತದೆ. ಹಾಗಾದರೆ ಮತದಾನ ಮಾಡದ ಶೇ.20ರಷ್ಟು ಮಂದಿಗೆ ಶಿಕ್ಷೆ ನೀಡಬೇಕಾ? ಶಿಕ್ಷೆ ನೀಡುವುದಾದರೆ ಮತದಾನ ಮಾಡದವರನ್ನು ಗುರುತಿಸುವುದು ಹೇಗೆ ಎನ್ನುವುದಕ್ಕೆ ವಿವರಣೆ ಕೊಡುವಂತೆ ರಾಜ್ಯಪಾಲರು ಕೇಳಿದ್ದರು.