BW News Bureau : ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಅಂತಿಮ ತೀರ್ಪನ್ನು ಏಪ್ರಿಲ್ 24ರಂದು ಹೈಕೋರ್ಟ್ ಕಾಯ್ದಿರಿಸಿದೆ.
ಏತನ್ಮಧ್ಯೆ ಚುನಾವಣೆ ಘೋಷಿಸದಂತೆ ನೀಡಿರುವ ತಡೆಯನ್ನು ಮುಂದುವರಿಸುವಂತೆ ಹೈಕೋರ್ಟ್ ಪೀಠ, ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಇಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತು ಸುದೀರ್ಘ ವಾದ, ಪ್ರತಿವಾದ ನಡೆಯಿತು.
ವಿಚಾರಣೆ ವೇಳೆ ಒಂದು ಹಂತದಲ್ಲಿ, ಬಿಬಿಎಂಪಿ ವಿಭಜನೆ ಹಿಂದೆ ದುರುದ್ದೇಶ ಇದೆಯೇ ಎಂದು ಹೈಕೋರ್ಟ್ ಪೀಠ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಆದರೆ ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಾ ಕುಮಾರ್, ರಾಜ್ಯ ಸರ್ಕಾರ ಕಾನೂನು ಪ್ರಕಾರವಾಗಿಯೇ ಕ್ರಮ ಕೈಗೊಂಡಿದೆ. ಮುಂದಿನ ಆರು ತಿಂಗಳೊಳಗೆ ಚುನಾವಣೆ ನಡೆಸುವುದಾಗಿ ಹೇಳಿದರು.
ಆದರೆ ಮುಖ್ಯ ನ್ಯಾಯಮೂರ್ತಿ ಡಿ.ಹೆಚ್.ವಘೇಲಾ ಹಾಗೂ ನ್ಯಾ.ರಾಮಮೋಹನ್ ರೆಡ್ಡಿ ಅವರಿದ್ದ ಪೀಠ, ರಾಜ್ಯ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದಾಗ, ಪ್ರೊ.ರವಿವರ್ಮಾ ಕುಮಾರ್ ಸಾಕಷ್ಟು ಸಮಜಾಯಿಷಿ ನೀಡಿದರು. ದೀರ್ಘಕಾಲ ವಾದ, ಪ್ರತಿವಾದ ಆಲಿಸಿದ ಪೀಠ, ತೀರ್ಪನ್ನು ಏ.24ಕ್ಕೆ ಪ್ರಕಟಿಸುವುದಾಗಿ ಹೇಳಿತು.