ನವದೆಹಲಿ : ಪಂಜಾಬ್ ಗೆ ತೆರಳಿ ರೈತರ ಸಮಸ್ಯೆಗಳನ್ನು ಆಲಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಏ.29ರಂದು ಸಂಸತ್ ನಲ್ಲಿ ರೈತರ ಸಮಸ್ಯೆಗಳ ಕುರಿತು ಭಾಷಣ ಮಾಡುವ ಸಾಧ್ಯತೆ ಇದೆ.
ಸಂಸತ್ ಅಧಿವೇಶನ ಪ್ರಾರಂಭವಾಗಿದ್ದು, ರೈತರ ಸಮಸ್ಯೆಗಳ ಕುರಿತು ಮಾತನಾಡಲು ಅನುಮತಿ ನೀಡಬೇಕೆಂದು ರಾಹುಲ್ ಗಾಂಧಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸ್ಪೀಕರ್, ರಾಹುಲ್ ಗಾಂಧಿಗೆ ಅನುಮತಿ ನೀಡಿದರೆ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ರಾಹುಲ್ ಗಾಂಧಿ, ಏ.30ರಿಂದ ದೇಶಾದ್ಯಂತ ಪಾದಯಾತ್ರೆ ಕೈಗೊಂಡು ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಏ.28ರಂದು ಪಂಜಾಬ್ ತೆರಳಿದ್ದ ರಾಹುಲ್ ಗಾಂಧಿ ಅಲ್ಲಿನ ರೈತರ ಸಮಸ್ಯೆಗಳನ್ನು ಆಲಿಸಿದ್ದರು.
ಸಂಸತ್ ಅಧಿವೇಶನದ ನಂತರ ಮಹಾರಾಷ್ಟ್ರಕ್ಕೆ ತೆರಳಲಿರುವ ರಾಹುಲ್ ಗಾಂಧಿ ಅಲ್ಲಿನ ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಎರಡು ದಿನ ಮಹಾರಾಷ್ಟ್ರದಲ್ಲೇ ಉಳಿಯಲಿದ್ದು, ವಿದರ್ಭದಿಂದ ರಾಹುಲ್ ಗಾಂಧಿ ಪಾದಯಾತ್ರೆ ಪ್ರಾರಂಭವಾಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಈ ಹಿಂದೆ ರೈತರ ಸಮಸ್ಯೆ ಹಾಗೂ ಭೂಸ್ವಾಧೀನ ಕಾಯ್ದೆ ವಿಷಯವಾಗಿಯೇ ಸಂಸತ್ ನಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕೈಗಾರಿಕೋದ್ಯಮಿಗಳ ಪರವಾಗಿರುವ ಸೂಟು ಬೂಟಿನ ಸರ್ಕಾರ ಎಂದು ಜರೆದಿದ್ದರು.