ಕಠ್ಮಂಡು : 'ಭೂಕಂಪ' ಪೀಡಿತ ನೇಪಾಳಕ್ಕೆ ಭಾರತವೊಂದನ್ನು ಹೊರತುಪಡಿಸಿ ಕೆಲವು ರಾಷ್ಟ್ರಗಳು ಅನಗತ್ಯ ಸಾಮಗ್ರಿಗಳನ್ನು ಕಳಿಸಿಕೊಡುತ್ತಿವೆ. ಇತ್ತೀಚೆಗಷ್ಟೇ ಕ್ರೈಸ್ತ ಪಾದ್ರಿಗಳು ಮತಾಂತರ ನಡೆಸುವ ಉದ್ದೇಶದಿಂದ ನೇಪಾಳಕ್ಕೆ ಬೈಬಲ್ ಗಳನ್ನು ಕಳಿಸಿಕೊಟ್ಟು ಅಲ್ಲಿನ ಪ್ರಧಾನಿಯಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಈ ಬೆನ್ನಲ್ಲೇ ಇಂತಹದ್ದೇ ಇನ್ನೊಂದು ಘಟನೆ ನಡೆದಿದೆ.
ನೇಪಾಳಕ್ಕೆ ಭಾರತ ಎಲ್ಲಾ ರೀತಿಯಲ್ಲೂ ನೆರವು ನೀಡುತ್ತಿದ್ದರೆ, ಪಾಕಿಸ್ತಾನ ಸಹ ನಿರಾಶ್ರಿತರಿಗೆ ಆಹಾರ ಸಾಮಾಗ್ರಿಗಳನ್ನು ಕಳಿಸುವ ಮೂಲಕ ನೆರವು ನೀಡಿದೆ. ಆದರೆ ಪಾಕಿಸ್ತಾನ ಕಳಿಸಿರುವ ಆಹಾರವನ್ನು ಸೇವಿಸಲು ನೇಪಾಳದಲ್ಲಿ ಯಾರೊಬ್ಬರೂ ಸಿದ್ಧರಿಲ್ಲ. ಏಕೆಂದರೆ ಪಾಕ್ ಕಳಿಸಿರುವುದು ಗೋಮಾಂಸವನ್ನು!.
ಪಾಕಿಸ್ತಾನ, ಗೋಮಾಂಸವನ್ನು ಕಳಿಸಿಕೊಟ್ಟಿರುವುದಕ್ಕೆ ಬಹುಸಂಖ್ಯಾತ ಹಿಂದೂಗಳಿರುವ ನೇಪಾಳ ಬೆಚ್ಚಿಬಿದ್ದಿದೆ. ನೇಪಾಳದಲ್ಲಿ ಗೋವುಗಳು ಪೂಜನೀಯವಾಗಿವೆ. ನೇಪಾಳದಲ್ಲಿ ಗೋಹತ್ಯೆ ನಿಷೇಧಿಸಲಾಗಿದ್ದು, ಹತ್ಯೆ ನಡೆಸಿದರೆ 12 ವರ್ಷಗಳ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. 1990ಕ್ಕೂ ಹಿಂದೆ ಗೋಹತ್ಯೆ ಮಾಡಿದವರಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು. ಈಗ ಪಾಕಿಸ್ತಾನ ತಿನ್ನಲು ಸಿದ್ಧವಿರುವ ಗೋಮಾಂಸವನ್ನು ಕಳಿಸಿರುವುದು ವ್ಯಾಪಕ ಟೀಕಿಗೆ ಗುರಿಯಾಗಿದೆ.
ಪಾಕಿಸ್ತಾನದ ಕ್ರಮ ಅಸಂವೇದನಾಶೀಲ ಎಂಬ ಟೀಕೆ ವ್ಯಕ್ತವಾಗಿದ್ದು, ನೇಪಾಳ ಹಾಗೂ ಪಾಕ್ ನಡುವಿನ ರಾಜತಾಂತ್ರಿಕ ವಿಷಯವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ. ಈ ವಿಷಯ ಈಗಾಗಲೇ ನೇಪಾಳ ಪ್ರಧಾನಿ ಹಾಗೂ ಅಲ್ಲಿನ ಗುಪ್ತಚರ ಇಲಾಖೆ ಗಮನಕ್ಕೆ ಬಂದಿದ್ದು, ಪಾಕಿಸ್ತಾನ ಗೋಮಾಂಸ ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸಲು ಆದೇಶಿಸಲಾಗಿದೆ. ಈ ವಿಷಯದ ಬಗ್ಗೆ ರಾಜತಾಂತ್ರಿಕ ಮಟ್ಟದಲ್ಲಿ ಪಾಕಿಸ್ತಾನದೊಂದಿಗೆ ಮಾತನಾಡಲಾಗುವುದು ಎಂದು ನೇಪಾಳ ಸರ್ಕಾರ ಪ್ರಸ್ತಾಪಿಸಿದೆ.