ಕಠ್ಮಂಡು : 'ಭೂಕಂಪ'ಕ್ಕೆ ತುತ್ತಾಗಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಭಾರತ, ಚೀನಾ, ಜಪಾನ್ ಸೇರಿದಂತೆ ವಿದೇಶಿ ರಕ್ಷಣಾ ತಂಡಗಳಿಗೆ ವಾಪಸ್ ತೆರಳಲು ನೇಪಾಳ ಸರ್ಕಾರ ಸಲಹೆ ನೀಡಿದೆ.
ನೇಪಾಳದ ಭೂಕಂಪದ ವರದಿಯನ್ನು ಬಿತ್ತರಿಸಲು ತೆರಳಿರುವ ಮಾಧ್ಯಮಗಳು ನೇಪಾಳಕ್ಕಿಂತಲೂ ತಮ್ಮದೇ ದೇಶದ ರಕ್ಷಣಾ ಪಡೆ ನಡೆಸುತ್ತಿರುವ ಕಾರ್ಯಾಚರಣೆಯನ್ನು ವೈಭವೀಕರಿಸುತ್ತಿದ್ದು, ನೇಪಾಳವನ್ನು ಕೀಳಾಗಿ ತೋರಿಸುತ್ತಿರುವುದರಿಂದ ಆತಂಕಗೊಂಡಿರುವ ನೇಪಾಳ, ಎನ್.ಡಿ.ಆರ್.ಎಫ್ ಸಿಬ್ಬಂದಿಗಳಿಗೆ ವಾಪಸ್ ತೆರಳುವಂತೆ ನೇಪಾಳ ಸೂಚಿಸಿದೆ.
ಭಾರತದ ರಕ್ಷಣಾ ಪಡೆ ನೇಪಾಳದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆ ಶ್ಲಾಘನೆಗೆ ಕಾರಣವಾಗಿತ್ತು. ಹೀಗೆ ವಿದೇಶಿ ಪಡೆಗಳ ರಕ್ಷಣಾ ಕಾರ್ಯ ಮತ್ತು ಅವುಗಳಿಗೆ ಸಿಕ್ಕ ಪ್ರಚಾರಕ್ಕೆ ನೇಪಾಳ ಕಂಗಾಲಾಗಿ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಗಳು ತಿಳಿಸಿವೆ.
ಆದರೆ ಮಾಹಿತಿ ಸಚಿವ ಮಿನೇಂದ್ರಾ ರಿಜಾಲ್, ಕಾಠ್ಮಂಡು ಮತ್ತು ಸುತ್ತಮುತ್ತ ಪ್ರದೇಶದಲ್ಲಿನ ದೊಡ್ಡ ಮಟ್ಟದ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಹಾಗಾಗಿ ಸಣ್ಣಪುಟ್ಟ ಕಾರ್ಯಗಳಿಗೆ ವಿದೇಶಿ ರಕ್ಷಣಾ ತಂಡದ ಅಗತ್ಯವಿಲ್ಲ. ಅದನ್ನು ನಮ್ಮ ಸ್ಥಳೀಯರೇ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದೇ ವೇಳೆ ನೇಪಾಳ ಸರ್ಕಾರದಿಂದ ಆದೇಶ ಬಂದಿರುವುದನ್ನು ಭಾರತದ ಎನ್.ಡಿ.ಆರ್.ಎಫ್ ಸಿಬ್ಬಂದಿಗಳು ತಳ್ಳಿಹಾಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿ ಒಂದು ವಾರ ಕಳೆದಿರುವ ಹಿನ್ನೆಲೆಯಲ್ಲಿ ವರದಿ ನೀಡುವಂತೆ ಮಾತ್ರ ಸರ್ಕಾರದಿಂದ ಸೂಚನೆ ಬಂದಿರುವುದಾಗಿ ಎನ್.ಡಿ.ಆರ್.ಎಫ್ ಸಿಬ್ಬಂದಿಗಳು ತಿಳಿಸಿದ್ದಾರೆ. ನೇಪಾಳದ ರಕ್ಷಣಾ ಕಾರ್ಯಾಚರಣೆ ವಿಷಯದಲ್ಲಿ ಭಾರತೀಯ ಮಾಧ್ಯಮಗಳು ಸಂವೇದನಾರಹಿತವಾಗಿ ವರ್ತಿಸುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.