ನವದೆಹಲಿ : ವಿದೇಶದಿಂದ ಅಕ್ರಮವಾಗಿ ದೇಣಿಗೆ ಪಡೆಯುತ್ತಿದ್ದ ಎನ್.ಜಿ.ಒ ಗಳ ವಹಿವಾಟುಗಳ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಆದೇಶಿಸಿದ ಕೆಲವೇ ತಿಂಗಳಲ್ಲಿ ಗ್ರೀನ್ ಪೀಸ್ ಎನ್.ಜಿ.ಒಗೆ ಹಣದ ಕೊರತೆ ಎದುರಾಗಿದೆ!
ಹಣದ ಕೊರತೆ ಎದುರಾಗಿರುವ ಪರಿಣಾಮ ಗ್ರೀನ್ ಪೀಸ್ ಎನ್.ಜಿ.ಒ ಮುಚ್ಚಲು ತಯಾರಿ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗ್ರೀನ್ ಪೀಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಸಮಿತ್ ಐಕ್, ಕೇಂದ್ರ ಸರ್ಕಾರ ತಮಗೆ ಬರುತ್ತಿದ್ದ ವಿದೇಶಿ ನಿಧಿಗೆ ಕಡಿವಾಣ ಹಾಕಿರುವ ಹಿನ್ನೆಲೆಯಲ್ಲಿ ಹಣದ ಕೊರತೆ ತೀವ್ರವಾಗಿ ಕಾಡುತ್ತಿದ್ದು, 14 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಯನ್ನು ಮುಚ್ಚಬೇಕಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಗ್ರೀನ್ ಪೀಸ್ ಬಳಿ ನೌಕರರಿಗೆ ನೀಡಲಾಗುವ ಒಂದು ತಿಂಗಳ ವೇತನ ಹಾಗೂ ಒಂದು ತಿಂಗಳ ಕಚೇರಿಯ ವೆಚ್ಚಗಳಿಗಾಗುವಷ್ಟು ಹಣ ಮಾತ್ರ ಉಳಿದಿದೆ. ಮುಂದಿನ ತಿಂಗಳಿನಿಂದ ವೇತನ ಹಾಗೂ ಕಚೇರಿ ವೆಚ್ಚಗಳನ್ನು ನಿರ್ವಹಿಸಲು ಸಾಧ್ಯವಾಗದ ಮಟ್ಟಿಗೆ ಹಣದ ಕೊರತೆ ಎದುರಾಗಿದೆ.
ಇದೇ ವೇಳೆ ತಮಗೆ ಹರಿದುಬರುತ್ತಿದ್ದ ಯಥೇಚ್ಛ ವಿದೇಶಿ ದೇಣಿಗೆಗೆ ಕಡಿವಾಣ ಹಾಕಿರುವ ಕೇಂದ್ರ ಗೃಹ ಸಚಿವಲಾಯದ ವಿರುದ್ಧ ಗ್ರೀನ್ ಪೀಸ್ ಉರಿದುಬಿದ್ದಿದೆ. ತನ್ನ ಯಶಸ್ವಿ ಕಾರ್ಯಾಚರಣೆಗಳನ್ನು ಸಹಿಸಲಾಗದೇ ಗ್ರೀನ್ ಪೀಸ್ ಸಂಸ್ಥೆಯನ್ನು ಮುಚ್ಚಲು ಹೊರಟಿರುವುದನ್ನು ಕೇಂದ್ರ ಗೃಹ ಸಚಿವಾಲಯ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದೆ.
ಗ್ರೀನ್ ಪೀಸ್ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಿ, ಈ ಸಂಸ್ಥೆ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಗ್ರೀನ್ ಪೀಸ್ ಸಂಸ್ಥೆ ಮುಚ್ಚುವ ಸ್ಥಿತಿಗೆ ತಲುಪಿದೆ.