ಲಖ್ನೌ : ವಿವಾದಾತ್ಮಕ ಹೇಳಿಕೆಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಪ್ರಯತ್ನ ಮಾಡುತ್ತಿದ್ದರೂ ಬಿಜೆಪಿ ನಾಯಕರು ನೀಡುವ ಅನವಶ್ಯಕ ಹೇಳಿಕೆಗಳಿಗೆ ಕಡಿವಾಣ ಬೀಳುವ ಲಕ್ಷಣ ಕಾಣುತ್ತಿಲ್ಲ.
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ಜಾಮೀನು ದೊರೆತಿರುವುದಕ್ಕೆ ಸಹಜವಾಗಿಯೇ ದೇಶಾದ್ಯಂತ ಅಸಮಾಧಾನ ವ್ಯಕ್ತವಾಗಿದೆ. ಆದರೆ ಇದನ್ನು ಬಿಜೆಪಿಯ ಕೆಲ ನಾಯಕರು ಧಾರ್ಮಿಕ ಪರಿಧಿಗೆ ತಂದು ಅನವಶ್ಯಕ ಹೇಳಿಕೆ ನೀಡಿದ್ದಾರೆ.
ಸಲ್ಮಾನ್ ಖಾನ್ ಗೆ ಜಾಮೀನು ದೊರೆತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ, ಸಲ್ಮಾನ್ ಖಾನ್ ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಆತನಿಗೆ ಜಾಮೀನು ದೊರೆತಿದೆ ಎಂದು ಹೇಳಿಕೆ ನೀಡಿದ್ದಾರೆ.
ಸಲ್ಮಾನ್ ಖಾನ್ ಮುಸ್ಲಿಮ್ ಆಗಿಲ್ಲದೇ ಇದ್ದಲ್ಲಿ, ಹಿಟ್ ಅಂಡ್ ರನ್ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ದೊರೆಯುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆಯಿಂದ ಬಿಜೆಪಿಗೆ ಮತ್ತಷ್ಟು ಮುಜುಗರ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ.
ಸಲ್ಮಾನ್ ಖಾನ್ ಗೆ ಜಾಮೀನು ನೀಡಿರುವ ನ್ಯಾಯಾಲಯದ ತೀರ್ಮಾನದ ಬಗ್ಗೆ ದೇಶಾದ್ಯಂತ ಅಸಮಾಧಾನ ವ್ಯಕ್ತವಾಗಿದ್ದರೂ ಅದನ್ನು ಧಾರ್ಮಿಕ ಚೌಕಟ್ಟಿನಲ್ಲಿ ವಿಶ್ಲೇಷಿಸುವ ಕೆಲಸ ನಡೆದಿರಲಿಲ್ಲ. ಸಾಧ್ವಿ ಪ್ರಾಚಿ ಆ ಕೆಲಸವನ್ನು ಮಾಡಿದ್ದಾರೆ.