ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ ನನಗೆ ತೃಪ್ತಿ ತಂದಿದೆ. ಜನರ ನಿರೀಕ್ಷೆಗೆ ತಕ್ಕಂತೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 2013ರ ಚುನಾವಣೆಯಲ್ಲಿ ನಮಗೆ ಜನ ಬೆಂಬಲ ಸಿಕ್ಕಿದೆ. ಆ ಸಂದರ್ಭದಲ್ಲಿ ನಾವು ಜನರಿಗೆ 165 ಭರವಸೆಗಳನ್ನು ನೀಡಿದ್ದೇವೆ. ಅದರಲ್ಲಿ ನೂರಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.
1 ಕೋಟಿ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಕೊಟ್ಟಿದ್ದೇವೆ. ನಾಲ್ಕು ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಿದ್ದೇವೆ. ರಾಜ್ಯದ 21 ಲಕ್ಷ ಜನರಿಗೆ ಬಡ್ಡಿ ರಹಿತ ಸಾಲ ನೀಡಿದ್ದೇವೆ ಎಂದು ಹೇಳಿದರು.
ಕಳೆದ ಮೂರು ಬಜೆಟ್ ಗಳಲ್ಲಿ ನಾವು ನೂರಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ವಿರೋಧ ಪಕ್ಷಗಳು ಟೀಕೆ ಮಾಡಬೇಕು. ಅದನ್ನು ನಾವು ಸ್ವೀಕರಿಸುತ್ತೇವೆ. ಆದರೆ ರಾಜಕೀಯಕ್ಕಾಗಿ ವಿಪಕ್ಷಗಳು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ನಂದಿತಾ ಸಾವು ಪ್ರಕರಣ, ಇತ್ತೀಚೆಗಿನ ಕೆರೆ ಒತ್ತುವರಿ ತೆರವು ಪ್ರಕರಣಗಳಲ್ಲಿ ವಿಪಕ್ಷಗಳು ಅನಾವಶ್ಯಕವಾಗಿ ರಾಜಕೀಯ ಮಾಡಿರುವುದಾಗಿ ಆರೋಪಿಸಿರುವ ಸಿದ್ದರಾಮಯ್ಯ, ವಿಪಕ್ಷಗಳು ಸರ್ಕಾರದ ಸಾಧನೆಗಳನ್ನು ಕಣ್ಣುಬಿಟ್ಟು ನೋಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ನಾಯಕರು, 5 ವರ್ಷದ ಆಡಳಿತದಲ್ಲಿ ಜಗತ್ತಿನಲ್ಲಿ ಎಲ್ಲೂ ನಡೆಯದಷ್ಟು ಭ್ರಷ್ಟಾಚಾರ ಎಸಗಿದ್ದರು. ಬಿಜೆಪಿ ಮುಖಂಡರು ಅತ್ಯಾಚಾರ, ಅನಾಚಾರ ನಡೆಸಿದ್ದರು. ಆದರೆ ಹಿಂದೆ ನಡೆದಷ್ಟು ಅತ್ಯಾಚಾರ, ಭ್ರಷ್ಟಾಚಾರ ಈಗ ನಡೆದಿಲ್ಲ. ಹಾಗಾಗಿ ಎಲ್ಲಾ ವಿಮರ್ಶೆಗಳನ್ನು ಜನರ ತೀರ್ಮಾನಕ್ಕೆ ಬಿಟ್ಟಿರುವುದಾಗಿ ತಿಳಿಸಿದರು.