ನವದೆಹಲಿ : ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮುಖ್ಯ ಸಾಕ್ಷಿಗಳನ್ನು ಮಂಪರು ಪರೀಕ್ಷೆಗೊಳಪಡಿಸಲು ಅನುಮತಿ ಕೇಳಿ ದೆಹಲಿ ಪೊಲೀಸರು ಪಾಟಿಯಾಲ ಹೌಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮಾಜಿ ಕೇಂದ್ರ ಸಚಿವ ಶಶಿ ತರೂರ್ ಸಹಾಯಕ ನಾರಾಯಣ್ ಸಿಂಗ್, ಚಾಲಕ ಬಜರಂಗಿ ಹಾಗೂ ಶಶಿ ತರೂರ್ ಸ್ನೇಹಿತ ಸಂಜಯ್ ದಿವಾನ್, ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದ ಸಾಕ್ಷಿಗಳಾಗಿದ್ದು, ಘಟೆನಗೆ ಸಂಬಂಧಿಸಿದ ಸತ್ಯಾಂಶಗಳನ್ನು ಮುಚ್ಚಿಡುತ್ತಿದ್ದಾರೆ. ಅಲ್ಲದೇ ಸುಳ್ಳು ಹೇಳುತ್ತಿರುವುದರಿಂದ ಸಾಕ್ಷಿಗಳನ್ನು ಮಂಪರು ಪರೀಕ್ಷೆಗೊಳಪಡಿಸಲು ಅನುಮತಿ ನೀಡಬೇಕೆಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸುನಂದಾ ಪುಷ್ಕರ್ ಮೃತಪಟ್ಟ ದಿನ, ಈ ಮೂರೂ ಸಾಕ್ಷಿಗಳು ಹೊಟೆಲ್ ಲಿಲಾ ಪ್ಯಾಲೆಸ್ ನಲ್ಲೇ ಇದ್ದರು, ಆದರೂ ಸುನಂದಾ ಪುಷ್ಕರ್ ಮೃತದೇಹದ ಮೇಲಿದ್ದ ಗಾಯದ ಗುರುತುಗಳ ಬಗ್ಗೆ ಸಾಕ್ಷಿಗಳು ಸತ್ಯಾಂಶ ಮುಚ್ಚಿಡುತ್ತಿದ್ದಾರೆ. 97 ಲೊಧಿ ಎಸ್ಟೆಟ್ ನಲ್ಲಿರುವ ಮನೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸುನಂದಾ ಪುಷ್ಕರ್ ಹೊಟೆಲ್ ಲಿಲಾ ಪ್ಯಾಲೆಸ್ ಗೆ ತೆರಳಿದ್ದರು ಎಂದು ಸಾಕ್ಷಿಗಳು ಹೇಳಿಕೆ ನೀಡಿದ್ದಾರೆ. ಆದರೆ ಹೊಟೆಲ್ ಲೀಲಾ ಪ್ಯಾಲೆಸ್ ಗೆ ತೆರಳುವ ಮುನ್ನವೇ ಮನೆ ದುರಸ್ತಿ ಕಾಮಗಾರಿ ಪೂರ್ಣಗೊಂಡಿತ್ತು. ಈ ವಿಷಯವೂ ಸೇರಿದಂತೆ ಪ್ರಮುಖ ಘಟನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲವಾದ್ದರಿಂದ ಸಾಕ್ಷಿಗಳು ಸುಳ್ಳು ಹೇಳುತ್ತಿದ್ದಾರೆ ಎಂಬ ಅನುಮಾನ ಬಲವಾಗಿದ್ದು ಪೊಲೀಸರು ಮಂಪರು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಪೊಲೀಸರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ, ಮೇ.20ರೊಳಗೆ ಕೊರ್ಟ್ ಗೆ ಹಾಜರಾಗುವಂತೆ ಮೂವರು ಮುಖ್ಯ ಸಾಕ್ಷಿಗಳಿಗೂ ಸಮನ್ಸ್ ಜಾರಿ ಮಾಡಿದೆ.