ಮುಂಬೈ : 42 ವರ್ಷಗಳಿಂದ ಮುಂಬೈನ ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅರೆಪ್ರಜ್ನಾವಸ್ಥೆಯಲ್ಲಿರುವ ನರ್ಸ್ ಅರುಣಾ ಶಾನಭಾಗ್ ಪರಿಸ್ಥಿತಿ ಗಂಭೀರವಾಗಿದ್ದು, ಸಧ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಅರುಣಾ ಶಾನಭಾಗ್ ನಿಮೋನಿಯಾದಿಂದ ಬಳಲುತ್ತಿದ್ದು, ಉಸಿರಾಡಲೂ ತೊಂದರೆ ಅನುಭವಿಸುತ್ತಿದ್ದಾರೆ. ಅರುಣಾ ಸ್ಥಿತಿ ಗಂಭೀರವಾಗಿದೆಯಾದರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಿಮೋನಿಯಾದಿಂದಾಗಿ ಆಕೆಯ ಶ್ವಾಸಕೋಶಗಳು ಶೇ.65ರಷ್ಟು ಆಮಜನಕವನ್ನು ತೆಗೆದುಕೊಳ್ಳಲು ಶಕ್ತವಾಗಿತ್ತು. ಈಗ ಅರುಣಾ ಉಸಿರಾಟ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉತ್ತರ ಕನ್ನಡದ ಹಳದಿಪುರದವರಾದ ಅರುಣಾ ಶಾನಭಾಗ್, ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಜೂನಿಯರ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 1973, ನ.27ರಂದು ಅದೇ ಆಸ್ಪತ್ರೆಯ ವಾರ್ಡ್ ಬಾಯ್ ಸೋಹನ್ ಲಾಲ್ ಬಾರ್ತಾ, ಅರುಣಾಮೇಲೆ ಅತ್ಯಾಚಾರ ನಡೆಸಿದ್ದ. ಈ ವೇಳೆ ಆಕೆಯ ಕುತ್ತಿಗೆಯನ್ನು ನಾಯಿಯ ಸರಪಳಿಯಿಂದ ಬಿಗಿದಿದ್ದರಿಂದ ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಸಂಚಾರ ಕಡಿತಗೊಂಡಿತ್ತು. ಹೀಗಾಗಿ ಅವರು ಅರೆಪ್ರಜ್ನಾವಸ್ಥೆಗೆ ಜಾರಿದ್ದರು.
2010ರ ಡಿಸೆಂಬರ್ ನಲ್ಲಿ ಪತ್ರಕರ್ತೆ ಪಿಂಕಿ, ಅರುನಾಗೆ ದಯಾಮರಣ ದಯಪಾಲಿಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. 2011ರ ಜನವರಿಯಲ್ಲಿ ವಿಚಾರಣೆ ಆರಂಭಿಸಿದ ನ್ಯಾಯಾಲಯ, ಆಕೆಯ ದೇಹಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲು ವೈದ್ಯಕೀಯ ಸಮಿತಿ ರಚಿಸಿತ್ತು.
ಆಸ್ಪತ್ರೆಯವರು ಅರುಣಾರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ 2011 ಮಾ.7ರಂದು ದಯಾಮರಣ ಅರ್ಜಿ ತಿರಸ್ಕರಿಸಿತ್ತು.