ಬೆಂಗಳೂರು : ಲಾಟರಿ ಹಗರಣದ ದಂಧೆಕೋರರ ಶೋಧ ಕಾರ್ಯಾಚರಣೆಗಿಳಿದು ಸಿಐಡಿ ನಡೆಸುತ್ತಿರುವ ತನಿಖೆಯಲ್ಲಿ ಈಗ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಹಾಗೂ ಆರಕ್ಷಕ ಮಹಾ ನಿರೀಕ್ಷಕ (ಐಜಿಪಿ) ಮಟ್ಟದ ಇಬ್ಬರು ಉನ್ನತ ದರ್ಜೆಯ ಅಧಿಕಾರಿಗಳ ಹೆಸರು ಕೇಳಿ ಬಂದಿರುವುದು ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಪಾರಿ ರಾಜನ್ ಜತೆ ಮೊಬೈಲ್ ನಲ್ಲಿ ಎಡಿಜಿಪಿ ಮತ್ತು ಐಜಿಪಿ ದರ್ಜೆಯ ಅಧಿಕಾರಿಗಳಿಬ್ಬರು ನಿರಂತರ ಸಂಪರ್ಕಹೊಂದಿದ್ದರು ಎಂಬ ಮಹತ್ವದ ಮಾಹಿತಿಯನ್ನು ಸಿಐಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ರಾಜನ್ ನ ಮೊಬೈಲ್ ಕರೆಗಳ ಕುರಿತು ಮಾಹಿತಿ ಸಂಗ್ರಹಿಸಿದಾಗ ಆತನೊಂದಿಗೆ ಹಿರಿಯ ಅಧಿಕಾರಿಗಳು ಹೊಂದಿದ್ದ ಸ್ನೇಹ ಬಯಲಾಗಿದೆ. ಅದರಲ್ಲೂ ಓರ್ವ ಎಡಿಜಿಪಿ, ಐಜಿಪಿ, ಎಸ್ಪಿ ಸೇರಿ ಹಿರಿಯ ಅಧಿಕಾರಿಗಳಿದ್ದರು. ಈಗಾಗಲೇ ಈ ಆರೋಪದ ಮೇಲೆ ಎಸ್ಪಿ ಧರಣೇಶ್ ಅಮಾನತುಗೊಂಡಿದ್ದಾರೆ.
ಅಲ್ಲದೆ, ಹಗರಣದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರಿಗೆ ಸಿಐಡಿ ಅಧಿಕಾರಿಗಳು ಪ್ರಾಥಮಿಕ ವರದಿ ಕೊಟ್ಟಿದ್ದಾರೆ ಎಂದು ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಲಾಟರಿ ದಂಧೆ ಬಯಲಾಗಿತ್ತು. ದಂಧೆಯ ಪ್ರಮುಖ ಆರೋಪಿ ರಾಜನ್, ತನಗೆ ಹಿರಿಯ ಪೊಲೀಸರ ಕೃಪೆ ಇರುವ ಬಗ್ಗೆ ಬಹಿರಂಗಪಡಿಸಿದ್ದ. ಈ ದಂಧೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಡಿಜಿಪಿ ಓಂಪ್ರಕಾಶ್ ಅವರು, ಲಾಟರಿ ದಂಧೆ ಪ್ರಕರಣದ ಕುರಿತು ಸಿಐಡಿ ತನಿಖೆಗೆ ಆದೇಶಿಸಿದ್ದರು.