ಚೆನ್ನೈ : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನಿಂದ ಖುಲಾಸೆಗೊಂಡಿರುವ ಜೆ.ಜಯಲಲಿತಾ ಮೇ.23ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಎಐಎಡಿಎಂಕೆ ವಕ್ತಾರೆ ಸಿ.ಆರ್.ಸರಸ್ವತಿ ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಸಂದರ್ಭದಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿದಿದ್ದರು. ಸುಮಾರು 8 ತಿಂಗಳ ಬಳಿಕ ಜಯಾ ಮತ್ತೆ ಸಿಎಂ ಗದ್ದುಗೆ ಏರುವ ಸಿದ್ಧತೆಯಲ್ಲಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಿರ್ದೊಷಿಯಾದ ನಂತರ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಶುಕ್ರವಾರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಮೇ 22ರಂದು ಆಯೋಜಿಸಿರುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಜಯಲಲಿತಾ ಅವರನ್ನು ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಜಯಲಲಿತಾ ಸಿಎಂ ಪಟ್ಟದಿಂದ ಕೆಳಗಿಳಿದಿದ್ದಾಗ ಜಯಾ ಆಪ್ತ ಒ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿಗೆ ಗಾದಿಯಲ್ಲಿ ಕೂರಿಸಿದ್ದರು.ಜಯಾ ಅಧಿಕಾರ ಸ್ವೀಕರಿಸುವದಿನವೇ ಪನ್ನೀರ್ ಸೆಲ್ವಂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿ ಹೇಳಿದೆ.