ಚೆನ್ನೈ : ಶನಿವಾರವಷ್ಟೇ 5ನೇ ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಜೆ.ಜಯಲಲಿತಾ, ರಾಜ್ಯದ ಮತದಾರರಿಗೆ ಭರ್ಜರಿ ಯೋಜನೆ ಘೋಷಿಸಿದ್ದಾರೆ.
ಈ ಘೋಷಣೆ ಹಿಂದೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಚಿತ್ತ ಇದೆ ಎಂದು ವಿಶ್ಲೇಷಿಸಲಾಗಿದೆ. ಕಚೇರಿಗೆ ಆಗಮಿಸಿ ಅಧಿಕೃತ ಕೆಲಸಗಳಿಗೆ ಚಾಲನೆ ನೀಡಿದ ಜಯಲಲಿತಾ, 1800 ಕೋಟಿ ರೂ. ಮೊತ್ತದ ಹಲವು ಯೋಜನೆಗಳನ್ನು ಘೋಷಿಸಿದರು.
* ರಾಜ್ಯದ ವಿವಿಧ ಭಾಗಗಳಲ್ಲಿ ಕಡಿಮೆ ದರದಲ್ಲಿ ಆಹಾರ ಒದಗಿಸುವ 201 ಹೊಸ ಅಮ್ಮಾ ಕ್ಯಾಂಟೀನ್ ಗಳನ್ನು ಆರಂಭಿಸಲಾಗುವುದು.
* ಬಡ ಜನರು ಆರ್ ಸಿಸಿ ಮನೆ ಹೊಂದಲು ಅನುವಾಗುವಂತೆ, ಪ್ರತಿ ಕುಟುಂಬಕ್ಕೆ 2.10 ಲಕ್ಷ ರೂ. ನೆರವು.
* ತೊಗರಿಬೇಳೆ ಮತ್ತು ಉದ್ದಿನಬೇಳೆ ದರ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಪ್ರತಿ ಕುಟುಂಬಕ್ಕೆ ಮಾಸಿಕ 500 ಗ್ರಾಂನಂತೆ 53.50 ಮತ್ತು 56 ರೂ. ನಲ್ಲಿ ವಿತರಣೆ.
* ನಗರ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ನಗರಾಡಳಿತ ಸಂಸ್ಥೆಗಳಿಗೆ 1000 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
* ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸೌಕರ್ಯ ಅಭಿವೃದ್ಧಿಗಾಗಿ 800 ಕೋಟಿ ರೂ. ಮೊತ್ತದ ಯೋಜನೆ ಜಾರಿ
* ಅಮ್ಮಾ ಕ್ಯಾಂಟೀನ್, ಆಸ್ಪತ್ರೆ, ಸಾರ್ವಜನಿಕ ಸ್ಥಳಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಸ್ವಚ್ಛ ಕುಡಿಯುವ ನೀರು ಒದಗಿಸುವ ಯಂತ್ರಗಳ ಸ್ಥಾಪನೆ.