ನವದೆಹಲಿ : ಐಐಟಿ-ಮದ್ರಾಸಿನ ವಿದ್ಯಾರ್ಥಿ ಸಂಘಟನೆ ನಿಷೇಧ ವಿಚಾರ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ನಡುವೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ’ಮೋದಿ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ವಿದ್ಯಾರ್ಥಿ ಸಂಘಟನೆ ನಿಷೇಧಿಸಲಾಗಿದೆ. ಇನ್ನೇನು? ವಾಕ್ ಸ್ವಾತಂತ್ರ್ಯ ನಮ್ಮ ಹಕ್ಕು. ಇದನ್ನು ಹತ್ತಿಕ್ಕುವ ವಿರುದ್ಧ ಹೋರಾಟಕ್ಕೆ, ಚರ್ಚೆಗೆ ಸಿದ್ಧ' ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಸ್ಮತಿ ಇರಾನಿ ಟ್ವೀಟ್ ಮಾಡಿದ್ದು, ’ಮುಂದೆ ನೀವು ನಿಮ್ಮ ಬಗ್ಗೆಯೇ ಹೋರಾಟ ಮಾಡಬೇಕು. ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾದ ಎನ್.ಎಸ್.ಯು.ಐ ಹಿಂದೆ ಅಡಗಿ ಕೂರಬೇಡಿ. ನಾನು ಅಮೇಠಿಗೆ ಶೀಘ್ರ ಬರುತ್ತಿದ್ದು, ಅಲ್ಲಿ ಸಿಗೋಣ' ಎಂದು ಬಹಿರಂಗ ಸವಾಲು ಒಡ್ಡಿ ಸರಣಿ ಟ್ವೀಟ್ ಮಾಡಿದ್ದಾರೆ.
ಅಲ್ಲದೇ ’ಚರ್ಚೆಗೆ ಸ್ಥಳ, ಸಮಯ ಹೇಳಿ.. ನಾನು ತಯಾರಾಗಿದ್ದೇನೆ. ಲೋಕಸಭೆ ಚುನಾವಣೆಯ ವೇಳೆ ನೀವು ನನ್ನನ್ನು ಬೆದರಿಸಿದಂತೆ ಈಗ ಬೆದರಿಸಲು ಸಾಧ್ಯವಿಲ್ಲ. ಭಾಷಣವೊಂದರಲ್ಲಿ ನೀವು ಎನ್.ಎಸ್.ಯು.ಐ ಕಾರ್ಯಕರ್ತರಿಗೆ ಶಾಂತಿ ಇದ್ದಲ್ಲಿ ಅಶಾಂತಿ ಸೃಷ್ಟಿಸಲು ಹೇಳಿದ್ದೀರಿ. ಅದಕ್ಕೇ ನಾನು ಕೆಲಸದ ಮೇಲೆ ಹೋಗಿದ್ದಾಗ ನಿಮ್ಮ ಗೂಂಡಾಗಳು ನನ್ನ ಮನೆ ಮುಂದೆ ಬಂದು ಗಲಾಟೆ ಮಾಡಿದ್ದಾರೆ' ಎಂದು ಕಿಡಿಕಾರಿದ್ದಾರೆ.