ನವದೆಹಲಿ : ನಕಲಿ ಕಾನೂನು ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಜಿತೇಂದ್ರ ಸಿಂಗ್ ತೋಮರ್ ಬಂಧನದ ಕುರಿತು ಆಪ್ ನಾಯಕ ಸಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ತೋಮರ್ ವಿರುದ್ಧ ಕಳೆದ ರಾತ್ರಿ ಎಫ್.ಐ.ಆರ್ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ದಕ್ಷಿಣ ದೆಹಲಿ ಪೊಲೀಸರು ತೋಮರ್ ಅವರನ್ನು ಬಂಧಿಸಿ, ಹಾವಾ ಕಾಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಜಿತೇಂದ್ರ ಸಿಂಗ್ ತೋಮರ್ ಉತ್ತರ ಪ್ರದೇಶದಲ್ಲಿ ಕಾನೂನು ಪದವಿ ಪೂರೈಸಿರುವ ಕುರಿತು ಮಾಹಿತಿ ನೀಡಿದ್ದರು. ಆದರೆ ಬಿಹಾರ ವಿವಿ ತೋಮರ್ ಡಿಗ್ರಿ ಸರ್ಟಿಫಿಕೇಟ್ ಫೇಕ್ ಎಂದು ಹೇಳಿತ್ತು. ಈ ನಿಟ್ಟಿನಲ್ಲಿ ದೆಹಲಿ ಬಿಜೆಪಿ ಘಟಕ ಕೂಡ ಜಿತೇಂದ್ರ ಸಿಂಗ್ ತೋಮರ್ ವಿರುದ್ಧ ದೂರು ನೀಡಿತ್ತು. ಅಲ್ಲದೇ ದೆಹಲಿ ಬಾರ್ ಕೌನ್ಸಿಲ್ ಕೂಡ ದೆಹಲಿ ಪೊಲೀಸರಿಗೆ ಪತ್ರ ಬರೆದು, ತೋಮರ್ ವಿರುದ್ಧ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ತೋಮರ್ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು.
ಈ ನಡುವೆ ತೋಮರ್ ಬಂಧನಕ್ಕೆ ಆಪ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ನೋಟಿಸ್ ನೀಡಿದದೇ ಏಕಾಏಕಿ ಕಾನೂನು ಸಚಿವರನ್ನೇ ಬಂಧಿಸಲಾಗಿದೆ. ಈ ಮೂಲಕ ಆಪ್ ಸರ್ಕಾರದ ಮೇಲೆ ಒತ್ತಡ ಹೇರುವ ಯತ್ನ ನಡೆಸಲಾಗುತ್ತಿ ಎಂದು ಆರೋಪಿಸಿದ್ದಾರೆ.
ದೆಹಲಿ ಪೊಲೀಸರು ಸಚಿವರ ಬಂಧನಕ್ಕೂ ಮೊದಲು ನೋಟಿಸ್ ನೀಡಿ ವಿವರಣೆ ಪಡೆಯಯಬಹುದಿತ್ತು. ಆದರೆ ನೋಟಿಸ್ ನೀಡುವುದಕ್ಕೂ ಮೊದಲೇ ಏಕಪಕ್ಷೀಯವಾಗಿ ಸಚಿವರನ್ನೇ ಬಂಧಿಸಿ ಕರೆದೊಯ್ದಿದ್ದಾರೆ. ಆಪ್ ಪಕ್ಷಕ್ಕೆ ಮುಜುಗರ ಉಂಟುವಾಡುವ ಉದ್ದೇಶದಿಂದ ಕಾನೂನು ಸಚಿವರನ್ನೇ ಬಂಧಿಸುವ ಮೂಲಕ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಪ್ ನಾಯಕರು ಕಿಡಿಕಾರಿದ್ದಾರೆ.