ಬೆಂಗಳೂರು : ಕಬ್ಬುಬೆಳೆಗಾರರ ಸಮಸ್ಯೆ ಸೇರಿದಂತೆ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಳಗಾವಿ ಅಧಿವೇಶನದ ಪೂರ್ವಭಾವಿಯಾಗಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಿಂದ ಜೂನ್ 25ರಂದು ಬೆಳಗ್ಗೆ ಆರಂಭವಾಗುವ ಪಾದಯಾತ್ರೆ 29ರಂದು ಬೆಳಗಾವಿಯಲ್ಲಿ ಕೊನೆಗೊಳ್ಳಲಿದೆ. 103 ಕಿಲೋ ಮೀಟರ್ ನ ಈ ಪಾದಯಾತ್ರೆಯಲ್ಲಿ ಪಕ್ಷದ ಮುಖಂಡರು, ಶಾಸಕರು ಪಾಲ್ಗೊಳ್ಳುತ್ತಾರೆ. ರೈತರು ಪಾಲ್ಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಕಬ್ಬು ಬೆಳೆಗಾರರಿಗೆ ಹಣ ಪಾವತಿಯಾಗದ ವಿಚಾರದಲ್ಲಿ ಸಹಕಾರ ಸಚಿವರು ಮತ್ತು ಮುಖ್ಯಮಂತ್ರಿ ಈವರೆಗೆ ನೂರು ಭರವಸೆ ನೀಡಿರಬಹುದು. ರೈತರಿಗೆ ಹಣ ಪಾವತಿ ಮಾಡದೇ ಇದ್ದರೆ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ, ಕಾರ್ಖಾನೆ ಬೀಗ ಜಡಿಯುತ್ತೇವೆಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ರೈತರಿಗೆ ಹಣ ಕೊಡಿಸಲಾಗಿಲ್ಲ ಎಂದು ಛೇಡಿಸಿದರು. ಎರಡು ವರ್ಷಗಳ ಸುಮಾರು 4,600 ಕೋಟಿ ರುಪಾಯಿ ಕಬ್ಬು ಬೆಳೆಗಾರರಿಗೆ ಪಾವತಿಯಾಗಬೇಕಾಗಿದೆ. ಕಬ್ಬು ಸರಬರಾಜಾದ 14 ದಿನಗಳಲ್ಲಿ ಕಾರ್ಖಾನೆ ಹಣ ಪಾವತಿಸದೇ ಇದ್ದರೆ ಶೇ.14ರ ಬಡ್ಡಿ ದರ ಸೇರಿಸಿ ಹಣ ಪಾವತಿ ಮಾಡಬೇಕಾಗುತ್ತದೆ. ಈ ಕಾನೂನು ಇದ್ದರೂ, ಅದು ಅನುಷ್ಠಾನವಾಗದೇ ಕಾನೂನು ರಚನೆಯಾದ ಕೊಠಡಿಯಿಂದ ಹೊರಗೇ ಬಂದಿಲ್ಲ ಎಂದು ಕಟಕಿದರು.
ಯಾವುದೇ ವೈಯಕ್ತಿಕ ಪ್ರತಿಷ್ಠೆಗೋ ಅಥವಾ ನಮ್ಮ ಲಾಭಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಪಾದಯಾತ್ರೆ ಎಷ್ಟು ಕಷ್ಟ ಎಂಬುದು ಗೊತ್ತಿದೆ. ಆದರೆ, ರೈತನ ಕಷ್ಟದ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಣ್ಣು ತೆರೆಸಲು ಈ ಪ್ರಯತ್ನ ಎಂದರು.