ಪಟ್ನಾ : ರಾಜ್ಯದ ಅಭಿವೃದ್ದಿಗಾಗಿ ಎನ್ ಡಿ ಎ ಗೆ ಮತ ನೀಡಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಿಹಾರ್ ಜನತೆಗೆ ಕರೆ ನೀಡಿದ್ದಾರೆ.
ಬಿಹಾರ್ ವಿಧಾನಸಭೆಯ ಬಿಜೆಪಿ ಚುನಾವಣಾ ಪ್ರಚಾರವನ್ನು ಗುರುವಾರ ಪಟ್ನಾದ ಗಾಂದೀ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ಬಿಹಾರದ ಎಲ್ಲಾ ಸಮಸ್ಯೆಗಳಿಗೆ ಅಭಿವೃದ್ಧಿಯೇ ಪರಿಹಾರ. ನಿಮಗೆ ರಾಜ್ಯ ಅಭಿವೃದ್ದಿಯಾಗಬೇಕೆಂದಿದ್ದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರಕ್ಕೆ ಮತ ನೀಡಿ ಎಂದು ಹೇಳಿದ್ದಾರೆ.
ಬಡತನಕ್ಕೆ ಜಾತಿ ಮತಗಳ ಭೇದವಿಲ್ಲ. ನೀವು ಬಡತನ ನಿರ್ಮೂಲನೆಗ ಬಯಸುವಿರಾದರೆ, ಬಿಹಾರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವಂತೆ ಮಾಡಿ ಎಂದು ಜನತೆಗೆ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಜಯಪ್ರಕಾಶ್ ನಾರಾಯಣ್ ಅವರಂತ ನಾಯಕರ ತತ್ವಗಳನ್ನು ಗಾಳಿಗೆ ತೂರಿ, ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಸೇರಿದ್ದಾರೆ ಎಂದರು.
ಎಲ್ ಪಿ ಜೆ ಅಧ್ಯಕ್ಷ ಮತ್ತು ಸಚಿವ ರಾಮ್ ವಿಲಾಸ್ ಪಾಸ್ವಾನ್, ಬಿಹಾರದ ಮಾಜಿ ಮುಖ್ಯಮಂತ್ರಿ ರಾಮ್ ಮಾಂಜೀ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.