ನವದೆಹಲಿ : ಲಿಬಿಯಾದಲ್ಲಿ ಅಪಹೃತರಾದ ನಾಲ್ವರು ಭಾರತೀಯರಲ್ಲಿ ಇಬ್ಬರು ಕನ್ನಡಿಗರು ಬಿಡುಗಡೆಗೊಂಡಿದ್ದಾರೆ.
ಅಪಹರಣಕ್ಕೊಳಗಾದ ನಾಲ್ವರು ಭಾರತೀಯರಲ್ಲಿ ಇಬ್ಬರನ್ನು ಸಿರ್ಟೆ ವಿಶ್ವವಿದ್ಯಾಲಯಕ್ಕೆ ವಾಪಾಸ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ, ಇನ್ನಿಬ್ಬರನ್ನು ರಕ್ಷಿಸಲು ಪ್ರಯತ್ನಪಡುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಈ ವಿಷಯದ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಲಿಬಿಯಾದಲ್ಲಿ ನಾಲ್ವರನ್ನು ಅಪಹರಿಸಲಾಗಿದೆ -ಲಕ್ಷ್ಮೀಕಾಂತ್ ಮತ್ತು ವಿಜಯ್ ಕುಮಾರ್ ಅವರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದರಿಂದ ನನಗೆ ಸಂತೋಷವಾಗಿದೆ. ಉಳಿದಿಬ್ಬರಿಗಾಗಿ ಪ್ರಯತ್ನ ನಡೆಯುತ್ತಿದೆ, ಎಂದು ಟ್ವೀಟ್ ಮಾಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಲಿಬಿಯಾದಲ್ಲಿ ನಾಲ್ವರು ಭಾರತೀಯರನ್ನು ಅಪಹರಿಸಲಾಗಿತ್ತು. ಅವರಲ್ಲಿ ಇಬ್ಬರು ಕರ್ನಾಟಕದವರು ಮತ್ತು ಇನ್ನಿಬ್ಬರು ಆಂಧ್ರಪ್ರದೇಶದವರಾಗಿದ್ದರು.
ಅಪಹರಣಕ್ಕೆ ಒಳಗಾದವರಲ್ಲಿ ಮೂವರು ಸಿರ್ಟೆ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದು ಒಬ್ಬರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಭಾರತಕ್ಕೆ ಹಿಂದಿರುಗಲು ಸಿರ್ಟೆಯಿಂದ ಟ್ರಿಪೋಲಿಗೆ ಕಾರಿನಲ್ಲಿ ಬರುತ್ತಿದ್ದಾಗ ಅವರನ್ನು ಅಪಹರಿಸಲಾಗಿತ್ತು.