ನವದೆಹಲಿ : ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಾಟಕ ಪ್ರವೀಣೆ ಎಂದು ಹೀಗಳೆದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಬಲವಾದ ತಿರುಗೇಟು ನೀಡಿದ್ದಾರೆ. 'ಸಂಸತ್ತಿನಲ್ಲಿ ಮಾತನಾಡುವುದಕ್ಕಿಂತ (ಮಾಧ್ಯಮಗಳಿಗೆ) ಹೇಳಿಕೆ ಕೊಡುವುದು ಸುಲಭ' ಎಂದು ಸೋನಿಯಾ ಗಾಂಧಿಗೆ ಮಾತಿನ ಛಾಟಿ ಬೀಸಿದ್ದಾರೆ.
ಗುರುವಾರ ಸಂಸತ್ತಿನಲ್ಲಿ ಸುಷ್ಮಾ ಸ್ವರಾಜ್ ಮಾತನಾಡಿ, ಲಲಿತ್ ಮೋದಿಗೆ ಸಹಾಯ ಮಾಡಿರುವುದಕ್ಕೆ ಏನಾದರೂ ಪುರಾವೆ ಇದ್ದಲ್ಲಿ ಅದನ್ನು ಹಾಜರುಪಡಿಸಿ ಎಂದು ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದನ್ನು ಉಲ್ಲೇಖಿಸಿ ಮಾತನಾಡಿದ ಸ್ಮೃತಿ ಇರಾನಿ, ಸುಷ್ಮಾ ಅವರ ಸವಾಲು ಅವರು ಲಲಿತ್ ಮೋದಿಗೆ ಸಹಾಯ ಮಾದಿಲ್ಲ ಎನ್ನುವುದಕ್ಕೆ ಪುರಾವೆ ಎಂದರು.
'ಕಾಂಗ್ರೆಸ್ ಪಕ್ಷ ಲೋಕಸಭೆ ಮತ್ತು ಚರ್ಚೆಯಿಂದ ಜಾರಿಕೊೞುತ್ತಿದೆ. ಯಾಕೆಂದರೆ ತಾವು ಮಾಡುತ್ತಿರುವ ಆರೋಪಗಳಿಗೆ ಅವರಲ್ಲಿ ಯಾವುದೇ ಪುರಾವೆಗಳಿಲ್ಲ. (ಮಾಧ್ಯಮಗಳಿಗೆ) ಒಂದೂವರೆ ನಿಮಿಷಗಳ ಹೇಳಿಕೆ ನೀಡುವುದು ಅವರಿಗೆ ಬಹಳ ಸುಲಭ ಆದರೆ ಸಂಸತ್ತಿನಲ್ಲಿ ಒಂದೂವರೆ ಗಂಟೆ ಮಾತನಾಡುವುದು ಅಸಾಧ್ಯ' ಎಂದು ಸೋನಿಯಾ ಗಾಂಧಿಯವರನ್ನು ಉದ್ದೇಶಿಸಿ ವ್ಯಂಗ್ಯವಾಡಿದರು.
ಸಂಸತ್ತಿನಲ್ಲಿ ಸುಷ್ಮ ಸ್ವರಾಜ್ ನೀಡಿದ ಹೇಳಿಕೆಯ ಬಗ್ಗೆ ಸೋನಿಯಾ, ಅವರು ನಾಟಕ ಮಾಡುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದ್ದರು.
ಸುಷ್ಮಾ ಸ್ವರಾಜ್ ಹೇಳಿಕೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಸೋನಿಯ ಪುತ್ರ ರಾಹುಲ್ ಗಾಂಧಿ ಸುಷ್ಮಾ ಅವರು ವಿದೇಶಾಂಗ ಸಚಿವಾಲಯವನ್ನು ಈ ವಿವಾದದ ವಿಚರದಲ್ಲಿ ಕತ್ತಲಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರಾಗಿದ್ದರೆ ಎಂದಿಗೂ ಹಾಗೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಸುಷ್ಮಾ ಹಾಗೂ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜ್ನ್ ವಿರುದ್ಧ ಗಾಂಧಿ ಪರಿವಾರ ಮಾಡುತ್ತಿರುವ ದಾಳಿ ಬಗ್ಗೆ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಸ್ಮೃತಿ ಇರಾನಿ, ಅವರಿಬ್ಬರೂ ಸಾಮಾನ್ಯ ಕುಟುಂಬಗಳಿಂದ ಬಂದವರು ಎಂದು ಟಾಂಗ್ ಕೊಟ್ಟರು.
'ಸಾಮಾನ್ಯ ಕುಟುಂಬದಿಂದ ಮಹಿಳೆಯೊಬ್ಬಳು ನಮ್ಮ ಸಮಾಜದಲ್ಲಿ ಒಂದು ಉತ್ತಮ ಸ್ಥಾನ ಪಡೆಯಬೇಕಾದರೆ ಹಗಲಿರುಳೂ ಕಷ್ಟಪಡಬೇಬೆಂಬುದು ದೇಶದ ಜನರಿಗೆ ಗೊತ್ತಿದೆ. ಅಂಥ ಮಹಿಳೆಯರ ಮಕ್ಕಳೂ ಸಹ ಕಠಿಣ ಶ್ರಮ ವಹಿಸುತ್ತಾರೆ. ಕಾಂಗ್ರೆಸ್ ಪಕ್ಷದಲ್ಲೊಂದು ರಿಯಾಯಿತಿ ಇದೆ, ಅದೆಂದರೆ ಗಾಂಧಿ ಪರಿವಾರದವರು ಬಿಸಿಲಲ್ಲಿ ದುಡಿದು ಬೆವರಿಳಿಸಿ ದುಡಿಯಬೇಕಾಗಿಲ್ಲ. ನಾನು ಅವರು ಮಾಡಿರುವ ಆರೋಪಗಳನ್ನು ನಿರಾಕರಿಸುತ್ತೇನೆ' ಎಂದು ಸ್ಮೃತಿ ಹೇಳಿದರು.
ಕಾಂಗ್ರೆಸ್ ಪ್ರತಿಭಟನೆಕಾರರು ಲೋಕಸಭಾ ಸ್ಪೀಕರ್ ಸುಮಿತ್ರಾ ಅವರ ನಿವಾಸದ ಎದುರು ಶರ್ಟ್ ಕಳಚಿ ಪ್ರತಿಭಟನೆ ಮಾಡಿದ್ದನ್ನು ಸ್ಮೃತಿ ಟೀಕಿಸಿದರು.
'ಕಾಂಗ್ರೆಸ್ಸಿನ ಹುಡುಗರು ಶರ್ಟ್ ಕಳಚಿ ಸ್ಪೀಕರ್ ವಿರುದ್ಧ ಪ್ರತಿಭಟಿಸಿದ್ದಾರೆ. ಲೋಕಸಭಾ ಸ್ಪೀಕರ್ ಸಂಸತ್ತಿನ ಗರಿಮೆಯ ಸಾಂಕೇತ. ಇಅದು ಕಾಂಗ್ರೆಸ್ ಮಹಿಳೆಯರಿಗೆ ಕೊಡುವ ಗೌರವದ ರೀತಿಯೆ? ಇದನ್ನೇ ರಾಹುಲ್ ಗಾಂಧಿ ಕಾಂಗ್ರೆಸ್ಸಿಗರಿಗೆ ಉಪದೇಶಿಸುತ್ತಾರೆಯೆ?' ಎಂದು ಪ್ರಶ್ನಿಸಿದರು.
'ಇದು ಅವರ ಸಂಸ್ಕೃತಿಯೆ ? ಅವರು ಯಾವ ಸಂದೇಶವನ್ನು ನೀಡುತ್ತಿದ್ದಾರೆ?' ಎಂದೂ ಇರಾನಿ ಕೇಳಿದರು.
ಸಂಸತ್ತಿನಲ್ಲಿ ನಿರಂತರ ಕೋಲಾಹಲ ಎಬ್ಬಿಸುತ್ತಿದ್ದ 25 ಕಾಂಗ್ರೆಸ್ ಸಂಸದರನ್ನು ಐದು ದಿನಗಳಿಗೆ ಅಮಾನತುಗೊಳಿಸಿದ್ದನ್ನು ಖಂಡಿಸಿ ಯುವ ಕಾಂಗ್ರೆಸ್ ಸದಸ್ಯರು ಗುರುವರ ಸ್ಪೀಕರ್ ನಿವಾಸದ ಎದುರು ಶರ್ಟ್ ಕಳಚಿ ಪ್ರತಿಭಟನೆ ಮಾಡಿದ್ದರು.
ಅಲ್ಲದೆ, ನಾಗಾ ಶಾಂತಿ ಒಪ್ಪಂದ ಹಾಗೂ ಜಿ.ಎಸ್.ಟಿ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಸನ್ನು ಟೀಕಿಸಿದ ಇರಾನಿ, ದೇಶದ ಆಂತರಿಕ ಭದ್ರತೆಯ ದೃಷ್ಠಿಯಿಂದ ಶಾಂತಿ ಒಪ್ಪಂದ ಐತಿಹಾಸಿಕವಾಗಿದೆ ಹಾಗೂ ಜಿ.ಎಸ್.ಟಿ. ಕಾಯ್ದೆ ದೇಶದಲ್ಲಿ ಆರ್ಥಿಕ ಕ್ರಾಂತಿಯನ್ನೇ ಉಂಟುಮಾಡಲಿದೆ ಎಂದರು.