ನವದೆಹಲಿ : ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ ಸ್ಥಳಕ್ಕೆ ಆಗಮಿಸುವ ಯಾತ್ರಿಗಳಿಗೆ ಸಾಧ್ಯವಾದಷ್ಟು ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಆದೇಶ ನೀಡಿದೆ.
ಏನಾದರೂ ಮಾಡೋಣ, ಸಾಧ್ಯವಾದರೆ ಸ್ಥಳದ ದುರಸ್ತಿ ಮಾಡಿ ಮತ್ತು ಅಲ್ಲಿನ ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸಿ ಎಂದು ನ್ಯಾಯಾಧೀಶರಾದ ಎ ಆರ್ ದಾವೆ ಮತ್ತು ಕುರಿಯನ್ ಜೋಸೆಫ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಇದಕ್ಕೂ ಮೊದಲು ಬಿಜೆಪಿ ಮುಖಂಡ ಸುಬ್ರಮಣ್ಯಂ ಸ್ವಾಮಿ ಅವರು ಯಾತ್ರಾರ್ಥಿಗಳಿಗೆ ಸೌಲಭ್ಯ ಒದಗಿಸಿ ಎಂದು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.
ರಾಮನ ಭಕ್ತರಾದ ಯಾತ್ರಿಗಳು ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಮೊದಲಾವುಗಳಿಂದ ವಂಚಿತರಾಗಿದ್ದಾರೆ. ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಅಸಮರ್ಪಕ ವ್ಯವಸ್ಥೆಗಳಿಂದ ತುಂಬಾ ತೊಂದರೆಗಳಾಗುತ್ತಿವೆ ಎಂದು ಸುಬ್ರಮಣ್ಯಂ ಸ್ವಾಮಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
1996 ರ ಯಥಾಸ್ಥಿತಿ ಆದೇಶ, ವಿವಾದಿತ ಸ್ಥಳದಲ್ಲಿ ಕಟ್ಟಡ ನಿರ್ಮಾಣ ನಿಷೇಧಕ್ಕೆ ಮಾತ್ರ ಸೀಮಿತ ಎಂದು ಸುಬ್ರಮಣ್ಯಂ ಸ್ವಾಮಿ ತಿಳಿಸಿದ್ದಾರೆ.