ನವದೆಹಲಿ : ದಿನೇ ದಿನೇ ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು 10 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವಂತೆ ಮೋದಿ ಸರಕಾರ ಕೇಂದ್ರ ಸರಕಾರಿ ಸ್ವಾಮ್ಯದ ಎಂಎಂಟಿಸಿ ಗೆ ನಿರ್ದೇಶಿಸಿದೆ.
ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾಮಂಡಳಿ (ಎನ್ಎಎಫ್ಇಡಿ) 10 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಇದುವರೆಗೂ ಟೆಂಡರ್ ಕರೆಯದಿರುವ ಹಿನ್ನಲೆಯಲ್ಲಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ಹಾಗಾಗಿ ಆದಷ್ಟು ಬೇಗ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವಂತೆ ಎಂಎಂಟಿಸಿಗೆ ಕೃಷಿ ಸಚಿವಾಲಯ ಸೂಚಿಸಿದೆ.
ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 80 ರೂ. ತಲುಪಿದ್ದು, ಇದು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ಬೆಲೆ ಏರಿಕೆಯನ್ನು ವಿಪಕ್ಷಗಳು ಸರಕಾರವನ್ನು ಹಣಿಯಲು ರಾಜಕೀಯವಾಗಿ ಬಳಸುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಈರುಳ್ಳಿ ಆಮದಿಗೆ ಸರಕಾರ ನಿಶ್ಚಯಿಸಿದೆ. ಪಾಕಿಸ್ತಾನ, ಚೀನಾ ಹಾಗೂ ಈಜಿಪ್ಟ್ ದೇಶಗಳಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.
ಮುಂಗಾರು ವ್ಯತ್ಯಯದಿಂದ ದೇಶದಲ್ಲಿ ಈ ವರ್ಷ ಈರುಳ್ಳಿ ಉತ್ಪಾದನೆಯಲ್ಲಿ ಇಳಿಕೆಯಾಗುವ ಸಂಭವವಿದ್ದು, ಇದರಿಂದ ಬೆಲೆ ಏರಿಕೆ ಕಂಡಿದೆ ಎನ್ನಲಾಗಿದೆ.