ರಾಲೆಗಾಂ ಸಿದ್ದಿ, ಮಹಾರಾಷ್ಟ್ರ : ಕಳೆದ 10 ದಿನಗಳಲ್ಲಿ ಎರಡನೇ ಬಾರಿ ಜೀವ ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ 'Z+' ರಕ್ಷಣೆ ನೀಡಲಾಗಿದೆ.
ಸರಳ ಜೀವನ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ವಿರುದ್ಧ ಹೋರಾಟ ಮುಂತಾದ ವಿಷಯಗಳನ್ನು ಎತ್ತಿಕೊಂಡು ಸದಾ ಸುದ್ದಿಯಲ್ಲಿರುವ ಗಾಂಧಿವಾದಿ ಹಜಾರೆ ಅವರಿಗೆ ಜನರ ತೆರಿಗೆ ಹಣದಲ್ಲಿ ಈಗ ಅತ್ಯುನ್ನತ ಸ್ಥರದ ರಕ್ಷಣೆ ನೀಡುವಂಥಾಗಿರುವುದು ವಿಪರ್ಯಾಸ.
ಕಳೆದ ಹತ್ತು ದಿನಗಳಲ್ಲಿ ಎರಡನೇ ಬಾರಿ ಹಜಾರೆ ಅವರಿಗೆ ಜೀವ ಬೆದರಿಕೆ ಪತ್ರ ಬಂದಿರುವುದರಿಂದ ಅವರಿಗೆ 'Z+' ರಕ್ಷಣೆ ನೀಡಲಾಗಿದೆ ಎಂದು ಮಹಾರಾಷ್ಟ್ರ ಸರಕಾರ ಹೇಳಿದೆ.
ಅಣ್ಣಾಗೆ ಎರಡನೇ ಬೆದರಿಕೆ ಪತ್ರ ಬಂದಿರುವ ಸಂಬಂಧ ಪೊಲೀಸ್ ವರದಿಯನ್ನು ಸಲ್ಲಿಸಲಾಗಿದೆ.
'ಪತ್ರದಲ್ಲಿ ಲಾತೂರ್ ಜಿಲ್ಲೆಯ ಮಹಾದೇವ್ ಪಂಚಾಲ್ ಎಂಬವನ ಹೆಸರು ನಮೂದಿಸಲಾಗಿದ್ದು, ಅದು ಒಸ್ಮಾನಾಬಾದ್ ನಿಂದ ರವಾನೆಯಾಗಿದೆ' ಎಂದು ಹಜಾರೆ ಸಹಾಯಕ ದತ್ತಾ ಅವಾರಿ ಪಿಟಿಐ ಗೆ ನೀಡಿದ ಫೋನ್ ಸಂದೇಶದಲ್ಲಿ ತಿಳಿಸಿದ್ದಾರೆ.
ಹತ್ತು ದಿನಗಳ ಹಿಂದೆ ಬಂದ ಬೆದರಿಕೆ ಪತ್ರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ದೂರ ಸರಿಯದಿದ್ದರೆ ನಿಮ್ಮನ್ನು 'ಮುಗಿಸಿಬಿಡಲಾಗುವುದು' ಎಂದು ಹಜಾರೆ ಅವರಿಗೆ ಧಮಕಿ ಹಾಕಲಾಗಿತ್ತು. ಅಹ್ಮೆದ್ ನಗರದ ಪಾರ್ನೆರ್ ಠಾಣೆಯಲ್ಲಿ ಈ ಬಗ್ಗೆ ಈಗಾಗಲೇ ಕೇಸ್ ದಾಖಲಿಸಲಾಗಿದೆ.
"ಪತ್ರ ಬಹುತೇಕ ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪತ್ರದಲ್ಲಿ ಎರಡು ವರ್ಷದ ಹಿಂದೆ ಪುಣೆಯಲ್ಲಿ ಹತ್ಯೆಗೀಡಾದ ವಿಚಾರವಾದಿ ನರೇಂದ್ರ ಧಾಬೋಲ್ಕರ್ ಅವರ ಸ್ಥಿತಿಯೇ ತಮಗೂ ಬರುವುದು ಎಂದು ಅಣ್ಣಾಗೆ ಬೆದರಿಕೆ ಹಾಕಲಾಗಿದೆ.