ಲಖ್ನೌ : ನವೆಂಬರದಲ್ಲಿ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಸೆಣೆಸಲು ನಿತೀಶ್ ಕುಮಾರ್ ನೇತೃತ್ವದಲ್ಲಿ ಒಟ್ಟುಗೂಡಿದ ಮೈತ್ರಿಕೂಟ (ಮಹಾ ಘಟಬಂಧನ್) ಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಆಘಾತಕಾರಿ ಹೊಡೆತ ಕೊಟ್ಟಿದ್ದಾರೆ.
ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿದ ಸಮಾಜವಾದಿ ಪಕ್ಷ, ಮುಂಬರುವ ಬಿಹಾರ ಚುನಾವಣೆಯಲ್ಲಿ ಎಸ್.ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದೆ.
'ಎಸ್.ಪಿ ಸಂಸತ್ ಮಂಡಲಿ ಮುಂಬರುವ ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ' ಎಂದು ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಮಾಧ್ಯಮ ವರದಿಗಾರರಿಗೆ ಲಖ್ನೌ ದಲ್ಲಿ ತಿಳಿಸಿದರು.
'ಅಗತ್ಯ ಬಿದ್ದಲ್ಲಿ ನಾವು ಇತರ ಪಕ್ಷಗಳ ಸಹಾಯ ಯಾಚಿಸುತ್ತೇವೆ. ಆದರೆ ಸಧ್ಯಕ್ಕೆ ಅಂತಹ ಯಾವುದೇ ಯೋಚನೆ ನಮ್ಮ್ ಮುಂದಿಲ್ಲ' ಎಂದು ಯಾದವ್ ತಿಳಿಸಿದರು.
ಬಿಹಾರಲ್ಲಿ ಮೈತ್ರಿಕೂಟ ಸ್ಪರ್ಧಿಸಲಿರುವ 243 ಸ್ಥಾನಗಳ ಪೈಕಿ ಎಸ್.ಪಿ ಗೆ ಕೇವಲ 5 ಸ್ಥಾನಗಳಲ್ಲಿ ಸ್ಪರ್ಧಿಸಲು ಮೈತ್ರಿಕೂಟ ಒಪ್ಪಿರುವುದಕ್ಕೆ ರಾಜ್ಯದ ಎಸ್.ಪಿ ನಾಯಕರಿಗೆ ಅತೀವ ಅಸಮಾಧಾನವಾಗಿದ್ದು, ಮೈತ್ರಿಕೂಟದಿಂದ ಹೊರಬರಲು ಇದೇ ಕಾರಣವೆನ್ನಲಾಗಿದೆ.
ಈ ಬಗ್ಗೆ ಗುರುವಾರ ನಡೆದ ಚಿಂತನಾಸಭೆಯಲ್ಲಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇನ್ನಿತರರು ಭಾಗವಹಿಸಿದ್ದರು.
ಆಗಸ್ಟ್ 30ರಂದು ಪಟ್ನಾದಲ್ಲಿ ನಡೆದ ಬಿಜೆಪಿ-ವಿರೋಧಿ ರ್ಯಾಲಿಯಲ್ಲಿ ಮುಲಾಯಂ ಸಿಂಗ್ ಭಾಗವಹಿಸದಿರುವುದು ಕುತೂಹಲಕ್ಕೆ ಕಾರಣವಾಗಿತ್ತು.
ಇದಕ್ಕೂ ಮುನ್ನ, ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಂಧಿ ಏರ್ಪಡಿಸಿದ ಇಫ್ತಾರ್ ಕೂಟದಲ್ಲೂ ಮುಲಾಯಂ ಭಾಗವಹಿಸಿರಲಿಲ್ಲ. ಮಾತ್ರವಲ್ಲ, ಸಂಸತ್ ನ ಮುಂಗಾರು ಅಧಿವೇಶನದುದ್ದಕ್ಕೂ ಪ್ರತಿಭಟನೆ ನಡೆಸಿ ಸಂಸತ್ ಕಲಾಪ ನಡೆಯದಂತೆ ಮಾಡಿದ ಕಾಂಗ್ರೆಸ್ ವಿರುದ್ಧವೂ ಮುಲಾಯಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇನ್ನಷ್ಟು ಕುತೂಹಲಕಾರಿ ವಿಚಾರವೆಂದರೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಎಸ್.ಪಿ ಮುಖ್ಯಸ್ಥ ಭೇಟಿ ಮಾಡಿರುವುದು.
ಒಟ್ಟಿನಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಅತ್ಯಂತ ಪ್ರತಿಷ್ಠೆಯ ವಿಷಯವಾಗಿರುವ ಬಿಹಾರ ಚುನಾವಣೆಯಲ್ಲಿ ಅವರ ವಿರುದ್ಧ ಆರ್.ಜೆ.ಡಿ, ಕಾಂಗ್ರೆಸ್ ಮುಂತಾದ ಪಕ್ಷಗಳನ್ನು ಒಟ್ಟು ಸೇರಿಸಿ ಹೇಗಾದರೂ ಮಾಡಿ ಚುನಾವಣೆ ಗೆಲ್ಲಲೇಬೇಕೆಂಬ ನಿತೀಶ್ ಕುಮಾರ್ ಗೆ ಇದೊಂದು ದೊಡ್ಡ ಪೆಟ್ಟು ಎನ್ನಲಾಗುತ್ತಿದೆ.
ಜಾತಿ ಲೆಕ್ಕಾಚಾರವೇ ಮುಖ್ಯವಾಗಿರುವ ಬಿಹಾರದಲ್ಲಿ ಯಾದವ ಮತಬ್ಯಾಂಕ್ ಪ್ರಮುಖವಾಗಿದ್ದು, ತೀವ್ರ ಸೆಣಸಾಟ ಇರುವ ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ಸೋಲು-ಗೆಲುವು ನಿರ್ಧಾರವಾಗಬಲ್ಲವು. ಈ ನಿಟ್ಟಿನಲ್ಲಿ ಮುಲಾಯಂ ಪಕ್ಷ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿರುವುದು ಲಾಲೂ-ನಿತೀಶ್ ಕೂಟಕ್ಕೆ ತಲೆನೋವಾಗಿ ಪರಿಣಮಿಸುವುದು ನಿಶ್ಚಿತ.