ಮಧುರೈ : ಮಧುರೈ ಸಮೀಪದ ವೃದ್ಧಾಚಲಂ ಬಳಿ ಚಲಿಸುತ್ತಿದ್ದ ಚೆನ್ನೈ-ಮಂಗಳೂರು ಎಕ್ಸ್ಪ್ರೆಸ್ ರೈಲಿನ (16859) 5 ಬೋಗಿಗಳು ಹಳಿ ತಪ್ಪಿದ್ದರಿಂದ 35 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗುರುವಾರ ತಡರಾತ್ರಿ 2 ಗಂಟೆಯ ವೇಳೆಗೆ ಪುವನೂರು ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದೆ.
ರೈಲ್ವೆ ಅಧಿಕಾರಿಗಳು, ಅಗ್ನಿಶಾಮಕ ದಳ ಮತ್ತಿತರ ರಕ್ಷಣಾ ಸೇವಾ ಸಿಬ್ಬಂದಿಗಳು ಅಪಘಾತದ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರ ರಕ್ಷಣೆಗೆ ಮುಂದಾದರು. ಗಾಯಗೊಂಡವರನ್ನು ವೃದ್ಧಾಚಲಂನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಅಪಘಾತದಿಂದಾಗಿ ತಮಿಳುನಾಡಿನ ದಕ್ಷಿಣ ಭಾಗದಿಂದ ಚೆನ್ನೈಗೆ ತೆರಳುವ ಹಲವಾರು ರೈಲುಗಳನ್ನು ತಂಜಾವೂರು ಮತ್ತು ಕುಂಭಕೋಣಂ ಮಾರ್ಗದಲ್ಲಿ ಚಲಿಸಲು ಬದಲಿ ಏರ್ಪಾಟು ಮಾಡಿರುವುದಾಗಿ ಮಧುರೈ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.