ನವದೆಹಲಿ : ಬೇಳೆ-ಕಾಳುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಸಂಗ್ರಹಣೆ ತಡೆಯಲು, ಕೇಂದ್ರ ಸರ್ಕಾರ ನೊಂದಾಯಿತ ಆಹಾರ ಸಂಸ್ಕರಣ ಘಟಕಗಳು, ಆಮದುದಾರರು ಮತ್ತು ರಫ್ತುದಾರರ ಬೇಳೆ-ಕಾಳುಗಳ ಸಂಗ್ರಹದ ಮೇಲೆ ಮಿತಿ ಹೇರಿದೆ.
ಬೇಳೆ-ಕಾಳುಗಳನ್ನು ಅಕ್ರಮವಾಗಿ ಸಂಗ್ರಹಿಸಿರುವವರ ಮೇಲೆ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವವರ ವಿರುದ್ಧ ಮತ್ತು ಬ್ಲ್ಯಾಕ್ ನಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ದ್ವಿದಳ ಧಾನ್ಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಅಕ್ರಮ ಸಂಗ್ರಹಣೆ ತಡೆಯಲು ಕೇಂದ್ರ ಸರ್ಕಾರ ಆಮದುದಾರರು ಮತ್ತು ರಫ್ತುದಾರರ ಸಂಗ್ರಹದ ಮೇಲೆ ಮಿತಿ ಹೇರಲು, ಅವಶ್ಯಕ ವಸ್ತುಗಳ ಕಾಯ್ದೆ, 1955 ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ತಿದ್ದುಪಡಿ ತಂದಿದೆ ಎಂದು ಸಚಿವಾಲಯ ಹೇಳಿದೆ.
ಸಂಪುಟ ಕಾರ್ಯದರ್ಶಿ ಸಹ ಪ್ರತಿದಿನ ಬೆಲೆ ಪರಿಸ್ಥಿತಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ. ಅವಶ್ಯಕ ವಸ್ತುಗಳ ಬೆಲೆಯ ಮೇಲೆ ಅವಶ್ಯಕವಾಗಿ ಬೇಳೆ ಕಾಳುಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರ ಜೊತೆ, ಬೆಲೆ ಏರಿಕೆ ತಡೆಯಲು ರಾಜ್ಯ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
ಅಕ್ರಮ ದಾಸ್ತಾನು ಮತ್ತು ಬ್ಲ್ಯಾಕ್ ನಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಕಳೆದ ಕೆಲವು ತಿಂಗಳುಗಳಿಂದ ಬೇಳೆ-ಕಾಳುಗಳ ಬೆಲೆ ದ್ವಿಗುಣಗೊಂಡಿದೆ. ಮಳೆಯ ಕೊರತೆಯಿಂದಾಗಿ ಈ ವರ್ಷ ಬೇಳೆ-ಕಾಳುಗಳ ಉತ್ಪಾದನೆಯಲ್ಲಿ 20 ಲಕ್ಷ ಟನ್ ಕಡಿತವಾಗಿದ್ದು, 2014-15 ವರ್ಷದಲ್ಲಿ ಕೇವಲ 1 ಕೋಟಿ 70 ಲಕ್ಷ ಟನ್ ದ್ವಿದಳ ಧಾನ್ಯ ಉತ್ಪಾದನೆಯಾಗಿದೆ ಎಂದು ಆಹಾರ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ವರ್ಷ 85 ರೂ ಇದ್ದ ಒಂದು ಕೆ ಜಿ ತೊಗರಿಬೇಳೆ ಈ ವರ್ಷ 190 ರೂ ಗೆ ಏರಿಕೆಯಾಗಿದೆ.ಅದೇ ರೀತಿ ಉದ್ದಿನಬೇಳೆ ಸಹ 100 ರೂ ಇಂದ 190 ರೂ ಗೆ ಏರಿಕೆಯಾಗಿದೆ.