ಬಾಲಿ : ಭಾರತದ ಮೋಸ್ಟ್ವಾಂಟೆಡ್ ನಂ.2, ಕುಖ್ಯಾತ ಭೂಗತ ದೊರೆ ಛೋಟಾ ರಾಜನ್ನನ್ನು ಬಹಳ ವರ್ಷಗಳ ಹುಡುಕಾಟದ ನಂತರ ಕೊನೆಗೂ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಭಾನುವಾರ ಬಂಧಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈತನನ್ನು ಭಾರತದ ವಶಕ್ಕೆ ನೀಡುವ ಸಾಧ್ಯತೆ ಇದೆ.
20ಕ್ಕೂ ಹೆಚ್ಚು ಕೊಲೆ, ಹಫ್ತಾ ವಸೂಲಿ, ಸುಲಿಗೆ, ಬೆದರಿಕೆ, ಅಕ್ರಮ ಶಸ್ತ್ರಾಸ್ತ್ರ, ಭೂಗತ ಚಟುವಟಿಕೆ, ಮಾದಕ ವಸ್ತು ಪ್ರಕರಣಗಳಲ್ಲಿ ಬೇಕಾಗಿದ್ದ ರಾಜನ್ ಬಂಧನದಿಂದ ಭಾರತದ ತನಿಖಾ ಸಂಸ್ಥೆಗಳಿಗೆ ಮಹತ್ವದ ಯಶಸ್ಸು ಲಭಿಸಿದೆ. ದಶಕದಿಂದ ನನೆಗುದಿಗೆ ಬಿದ್ದಿರುವ ಅನೇಕ ಪ್ರಕರಣಗಳನ್ನು ಭೇದಿಸುವ ವಿಶ್ವಾಸ ಮೂಡಿದೆ. ಇತ್ತೀಚಿಗೆ ಕೊಲ್ಹಾಪುರದ ವಿಚಾರವಾದಿ ಗೋವಿಂದ ಪಾನ್ಸರೆ ಮತ್ತು ಮುಂಬೈನ ಪತ್ರಕರ್ತ ಜೆ ಡೇ ಕೊಲೆ ಪ್ರಕರಣದಲ್ಲೂ ರಾಜನ್ ಹೆಸರು ಕೇಳಿಬಂದಿತ್ತು.
ಅಚ್ಚರಿಯ ವಿಷಯವೆಂದರೆ, ಆಸ್ಟ್ರೇಲಿಯಾದಿಂದ ಇಂಡೋನೇಷ್ಯಾಕ್ಕೆ ತೆರಳುವ ವೇಳೆ ಛೋಟಾ ರಾಜನ್ ಸಲ್ಲಿಸಿದ್ದ ಪಾಸ್ಪೋರ್ಟ್ನಲ್ಲಿ ತನ್ನ ಹೆಸರನ್ನು ಮೋಹನ್ ಕುಮಾರ್ ಎಂದೂ, ತಾನು ಕರ್ನಾಟಕದ ಮಂಡ್ಯ ನಿವಾಸಿ ಎಂದು ವಿಳಾಸ ನೀಡಿದ್ದಾನೆ. ಹೀಗಾಗಿ ರಾಜನ್ ಬಂಧನವಾಗುತ್ತಲೇ, ಬಂಧಿತ ವ್ಯಕ್ತಿ, ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕರ್ನಾಟಕ ಮೂಲದ ಸೈನೇಡ್ ಮೋಹನ್ ಎಂದು ಸುದ್ದಿ ಆಗಿತ್ತು. ಕೊನೆಗೆ ಸಿಬಿಐ ಬಂಧಿತ ವ್ಯಕ್ತಿ ಛೋಟಾ ರಾಜನ್ ಎಂದು ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆಯಿತು.
ಛೋಟಾ ರಾಜನ್ ಬಂಧನವು ಭಾರತಕ್ಕೆ ಸಿಕ್ಕ ದೊಡ್ಡ ಯಶಸ್ಸು. ಈತನನ್ನು ಬಂಧಿಸಿದ ಇಂಡೋನೇಷ್ಯಾ ಪೊಲೀಸರಿಗೆ ಧನ್ಯವಾದ ಎಂದು ಭಾರತದ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು.
ರಾಜನ್ ಗಡೀಪಾರಿನ ಬಗ್ಗೆ ಭಾರತದ ತನಿಖಾ ಸಂಸ್ಥೆಗಳು ಮತ್ತು ಸಿಬಿಐ, ಇಂಡೋನೇಷ್ಯಾ ಸಂಪರ್ಕದಲ್ಲಿವೆ. ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಭಾರತದ ವಶಕ್ಕೆ ಪಡೆಯಲಾಗುತ್ತದೆ ಎಂದರು.