Vijayanagar : ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ನಡುವೆ ರೀಚ್-2ರಲ್ಲಿ ನಮ್ಮ ಮೆಟ್ರೋ ಸಂಚಾರ ಸೋಮವಾರ ಸಂಜೆ ಆರಂಭವಾಗಲಿದೆ.
6.80 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಸಂಜೆ 4 ಗಂಟೆಗೆ ಮಾಗಡಿ ರಸ್ತೆ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ಹಸಿರು ನಿಶಾನೆ ತೋರಿಸಲಿದ್ದಾರೆ. ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಂಸದ ಪಿ.ಸಿ. ಮೋಹನ್, ಮೇಯರ್ ಬಿ.ಎನ್. ಮಂಜುನಾಥರೆಡ್ಡಿ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿ) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ಸಿಂಗ್ ಖರೋಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.
ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸಲಿರುವ ಮುಖ್ಯಮಂತ್ರಿ ಹಾಗೂ ಇತರೆ ಗಣ್ಯರು, ಅದೇ ರೈಲಿನಲ್ಲಿ ನಾಯಂಡಹಳ್ಳಿ ಟರ್ಮಿನಲ್ಗೆ ಬಂದಿಳಿಯಲಿದ್ದಾರೆ.
ಸುಮಾರು ಎರಡೂವರೆ ವರ್ಷಗಳಿಂದ ಈ ಮಾರ್ಗದ ಮೆಟ್ರೋ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈಗ ಅದು ಪೂರ್ಣಗೊಂಡಿದೆ.
ಈ ಕಾರಿಡಾರ್ನ ಒಟ್ಟಾರೆ ಉದ್ದ 18.10 ಕಿ.ಮೀ. ರೀಚ್-2 ಮಾಗಡಿ ರಸ್ತೆ, ಹೊಸಹಳ್ಳಿ, ಅತ್ತಿಗುಪ್ಪೆ, ವಿಜಯನಗರ, ಗೀತಾಂಜಲಿನಗರ, ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಲಿದೆ.
ಸಾರ್ವಜನಿಕರು ಈ ರೈಲಿನಲ್ಲಿ ಪ್ರಯಾಣಿಸಲು ಇನ್ನೂ ಎರಡು ದಿನ ಕಾಯಬೇಕು. ವಾಣಿಜ್ಯ ಸಂಚಾರದ ದಿನಾಂಕವನ್ನೂ ಸೋಮವಾರ ಪ್ರಕಟಿಸಲಾಗುವುದು ಎಂದು ಬಿಎಂಆರ್ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಖರೋಲಾ ಹೇಳಿದ್ದಾರೆ.