ಸತಾರ : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಕರ್ನಲ್ ಸಂತೋಷ್ ಮಹದಿಕ್ ಅಂತ್ಯಕ್ರಿಯೆ ನಡೆಯಿತು.
ಮಂಗಳವಾರ ಎನ್ಕೌಂಟರ್ ನಲ್ಲಿ ಮೃತಪಟ್ಟ 39 ವರ್ಷದ ಕರ್ನಲ್ ಅಂತ್ಯಕ್ರಿಯೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮತ್ತು ಉನ್ನತ ಸೈನ್ಯಾಧಿಕಾರಿಗಳು ಭಾಗವಹಿಸಿದ್ದರು. ಸುತ್ತಮುತ್ತಲಿನ ನೂರಾರು ಜನರು ಹುತಾತ್ಮ ಯೋಧನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಸತಾರ ಜಿಲ್ಲೆಯ ಕರ್ನಲ್ ಮಹದಿಕ್ ಮೃತದೇಹವನ್ನು ಹುಟ್ಟೂರಿಗೆ ಸಾಗಿಸುವಾಗ, ಬುಧವಾರ ರಾತ್ರಿ ಪೂನಾದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶ್ರದ್ಧಾಂಜಲಿ ಸಮರ್ಪಿಸಿದರು. ರಾಜ್ಯ ಮತ್ತು ದೇಶ ಕರ್ನಲ್ ಮಹದಿಕ್ ಕುಟುಂಬದ ಒಳಿತಿಗಾಗಿ ಜೊತೆಯಲ್ಲಿ ನಿಲ್ಲುತ್ತದೆ ಎಂದು ಫಡ್ನವೀಸ್ ಹೇಳಿದರು.
ಜಮ್ಮು ಕಾಶ್ಮೀರದ ಕುಪ್ವಾರ ಗಡಿ ನಿಯಂತ್ರಣ ರೇಖೆ ಸನಿಹ ಉಗ್ರರೊಂದಿಗಿನ ಕಾದಾಟದಲ್ಲಿ 41ನೇ ರಾಷ್ಟ್ರೀಯ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಸಂತೋಷ್ ಅವರಿಗೆ ಉಗ್ರರು ಹಾರಿಸಿದ್ದ ಗುಂಡಿನಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.