Sullia : ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯ ಆಲಯದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಒಂದು ದಿನದ ಯೋಗ ಕಾರ್ಯಾಗಾರವನ್ನು ಫೆಬ್ರವರಿ 14ರಂದು ರಥಸಪ್ತಮಿಯ ದಿನ ನಡೆಸಿದರು.
ಸೂರ್ಯನ ಜನ್ಮದಿನವಾದುದರಿಂದ ಸೂರ್ಯನಮಸ್ಕಾರದೊಂದಿಗೆ ಆರಂಭವಾದ ಕಾರ್ಯಾಗಾರದಲ್ಲಿ ಯೋಗಮುದ್ರೆಗಳು, ಬಣ್ಣಚಿಕಿತ್ಸೆ ಹಾಗೂ ಚಕ್ರಧ್ಯಾನಗಳನ್ನು ಪ್ರಾಯೋಗಿಕವಾಗಿ ಕಲಿಸಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಮತ್ತು ಆಸಕ್ತ ಸಾರ್ವಜನಿಕ ಅಭ್ಯಾಸಿಗಳು ಭಾಗವಹಿಸಿದ್ದರು. ಮಂಗಳೂರಿನ ಶ್ಯಾಮ ಪ್ರಸಾದ ಮುದ್ರಜೆ ಹಾಗೂ ದಯಾನಂದ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.
ಆರಂಭದಲ್ಲಿ ನಿವೃತ್ತ ಶಿಕ್ಷಕ ಪೆದಮಲೆ ರಾಮಭಟ್ಟರು ದೀಪ ಬೆಳಗಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೊಳಂಬೆ ಚಿದಾನಂದ ಗೌಡರು ಅತಿಥಿಗಳಾಗಿ ವ್ಯಕ್ತಿತ್ವ ವಿಕಸನದಲ್ಲಿ ಸಮಾಜಮುಖಿ ಚಿಂತನೆಗೆ ಯೋಗ ಸಹಾಯಕ ಎಂದರು. ಕಾರ್ಯಾಗಾರವನ್ನು ಸಂಘಟಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಇನ್ನು ಪ್ರತಿ ತಿಂಗಳ ಎರಡನೇ ಆದಿತ್ಯವಾರದಂದು ಇಂತಹ ಯೋಗ ಕಾರ್ಯಾಗಾರಗಳನ್ನು ನಡೆಸಲಾಗುವುದೆಂದು ಹೇಳಿದರು. ಕೊನೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ವಂದಿಸಿದರು.