ಬೆಂಗಳೂರು : ಎರಡನೇ ಹಂತದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಶನಿವಾರ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಿತ್ತೂರು ಗ್ರಾಮದಲ್ಲಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದರೆ, ಕೆಲವೆಡೆ ಘರ್ಷಣೆ ಸಂಭವಿಸಿರುವುದಾಗಿ ಮೂಲಗಳು ತಿಳಿಸಿವೆ. ಬೀದರ್ ಜಿಲ್ಲೆಯ 5 ಕಡೆಗಳಲ್ಲಿ ಮತದಾನಕ್ಕೆ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ. ಮುದ್ದೇಬಿಹಾಳದ ಅಡವಿಸೋಮನಾಳದಲ್ಲಿ ಮತದಾನ ಸ್ಥಗಿತವಾಗಿದೆ.
ಹದಿನೈದು ಜಿಲ್ಲಾ ಪಂಚಾಯಿತಿಯ 530 ಕ್ಷೇತ್ರಗಳು ಹಾಗೂ 80 ತಾಲೂಕು ಪಂಚಾಯಿತಿಯ 1936 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 8616 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮತದಾನಕ್ಕಾಗಿ 17698 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಆ ಪೈಕಿ 4097 ಸೂಕ್ಮ ಹಾಗೂ 3626 ಅತಿ ಸೂಕ್ಷ್ಮಮತಗಟ್ಟೆಗಳು. ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, 1,42,74,895 ಮತದಾರರು ಮತದಾನದ ಹಕ್ಕು ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ವಿದ್ಯುನ್ಮಾನ ಯಂತ್ರದಲ್ಲಿ ನೋಟಾ ಅವಕಾಶ ಕಲ್ಪಿಸಲಾಗಿದೆ.