ಬೆಂಗಳೂರು : ವಿಧಾನಸಭೆಯ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಇಡೀ ಕಲಾಪ ವಾಚ್ ಗದ್ದಲದಲ್ಲಿ ಮುಳುಗಿತ್ತು. ಎರಡೂ ಸದನಗಳಲ್ಲಿ ಪ್ರತಿಪಕ್ಷವಾದ ಬಿಜೆಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣದ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಮುಂದಾದರೆ, ಕಾಂಗ್ರೆಸ್ ಸದಸ್ಯರು ಇದಕ್ಕೆ ಪ್ರತಿರೋಧವೊಡ್ಡಿದ್ದರಿಂದ ಕೋಲಾಹಲಕಾರಿ ವಾತಾವರಣ ನಿರ್ಮಿಸಿದರು.
ಬಿಜೆಪಿ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಚ್ ತೊಟ್ಟ ಚಿತ್ರಗಳನ್ನು ಪ್ರದರ್ಶಿಸಿ ವಾಗ್ಧಾಳಿ ನಡೆಸಿದರು. ಇತ್ತ ಕಾಂಗ್ರೆಸ್ ಸದಸ್ಯರು ಬಿಜೆಪಿಯ ನಾಯಕರಾದ ಯಡಿಯೂರಪ್ಪ, ಸದಾನಂದಗೌಡ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ದುಬಾರಿ ವಾಚ್ ತೊಟ್ಟ ಚಿತ್ರಗಳನ್ನು ಪ್ರದರ್ಶಿಸಿ ಪ್ರತಿದಾಳಿ ನಡೆಸಿದರು. ಇದರಿಂದ ಸದನದಲ್ಲಿ ಕೆಲ ಕಾಲ ಕೋಲಾಹಲ ಉಂಟಾಯಿತು.
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಮುಖ್ಯಮಂತ್ರಿ, ಮಂತ್ರಿ ಹಾಗೂ ಪ್ರಧಾನಮಂತ್ರಿ ನಡವಳಿಕೆ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ನಿಯಮಾವಳಿ ಹಾಗೂ ಫೆರಾ ಕಾಯ್ದೆಗಳು ಈ ಪ್ರಕರಣದಲ್ಲಿ ಉಲ್ಲಂಘನೆಯಾಗಿವೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಡುಗೊರೆ ನೀಡಿದಾತ ಅನಿವಾಸಿ ಭಾರತೀಯರಾಗಿರುವುದರಿಂದ ಇಲ್ಲಿ ಫೆರಾ ಕಾಯ್ದೆ ಉಲ್ಲಂಘನೆ ಪ್ರಶ್ನೆ ಬರುವುದಿಲ್ಲ. ಇಷ್ಟು ಸಾಮಾನ್ಯ ಜ್ಞಾನವಿಲ್ಲದೆ ನನ್ನ ತೇಜೋವಧೆಗೆ ಯತ್ನಿಸಲಾಗುತ್ತಿದೆ ಎಂದರು.
ಗದ್ದಲ ಕೋಲಾಹಲದ ನಡುವೆಯೇ ಬಿಜೆಪಿಯು ನಿಲುವಳಿ ಸೂಚನೆ ಕುರಿತ ಪೂರ್ವ ಭಾವಿ ಪ್ರಸ್ತಾಪ ಪೂರೈಸಿದ ನಂತರ ಸ್ಪೀಕರ್ ನಿಲುವಳಿ ಸೂಚನೆಗೆ ಒಪ್ಪದೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲೇ ಈ ವಿಚಾರ ಪ್ರಸ್ತಾಪಿಸಲು ಇರುವ ಅವಕಾಶವನ್ನು ಬಳಸಿಕೊಳ್ಳುವಂತೆ ಬಿಜೆಪಿ ನಾಯಕರಿಗೆ ಸೂಚಿಸಿದರು. ಇದಕ್ಕೆ ಒಪ್ಪದ ಬಿಜೆಪಿ ಮತ್ತು ಜೆ ಡಿ ಎಸ್ ಸದಸ್ಯರು ಧರಣಿಗೆ ಮುಂದಾದಾಗ ಎರಡು ಬಾರಿ ಸದನವನ್ನು ಮುಂದೂಡಿದ ಸ್ಪೀಕರ್ ಅವರು ನಂತರವೂ ಬಿಜೆಪಿ ಪಟ್ಟು ಬಿಡದಿದ್ದರಿಂದ ಕಲಾಪವನ್ನು ಬುಧವಾರಕ್ಕೆ ಮುಂದಕ್ಕೆ ಹಾಕಿದರು.