ಬೆಂಗಳೂರು : ಮಹಿಳಾ ಅಭಿವೃದ್ಧಿಗೆ ಸಂಬಂಧಪಟ್ಟ ಅನುದಾನದ ಬಗ್ಗೆ ಪ್ರತ್ಯೇಕ ಲೆಕ್ಕ ಶೀರ್ಷಿಕೆ ಮಂಡಿಸುವ ಕುರಿತು, ಪ್ರತಿ ವಿಧಾನಮಂಡಲ ಅಧಿವೇಶನದಲ್ಲೂ ಲಿಂಗ ತಾರತಮ್ಯದ ಕುರಿತು ಪ್ರತ್ಯೇಕವಾಗಿ ಚರ್ಚಿಸಲು ಒಂದು ದಿನ ಅವಕಾಶ ಮಾಡಿಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮತ್ತು ಇತರೆ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವಿಧಾನಮಂಡಲದ ಅಧಿವೇಶನದಲ್ಲಿ ಒಂದು ದಿನ ಲಿಂಗ ತಾರತಮ್ಯ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ನೀಡುವ ಅನುದಾನದ ಬಳಕೆಯ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಬೇಡಿಕೆ ಇಟ್ಟಿದ್ದಾರೆ. ಆ ಕುರಿತು ಕಾನೂನು ಮತ್ತು ಸಂಸದೀಯ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮತ್ತು ಶಿಕ್ಷೆ ವಿಧಿಸಲು ಸಾಕಷ್ಟು ಕಾನೂನುಗಳು ಇವೆ. ಆದರೆ, ಕೇವಲ ಕಾನೂನಿನಿಂದಲೇ ದೌರ್ಜನ್ಯವನ್ನು ತಡೆಯಲು ಆಗುವುದಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು.
ಭ್ರೂಣ ಹತ್ಯೆ ಸಂಪೂರ್ಣ ನಿಲ್ಲಬೇಕು. ಇಲ್ಲದಿದ್ದರೆ ಸ್ತ್ರೀ ಸಂಖ್ಯೆಯೇ ಕಡಿಮೆ ಆಗುತ್ತದೆ. ಅಪ್ಪ-ಅಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳುವವರು ಹೆಣ್ಣು ಮಕ್ಕಳೇ ಹೊರತು, ಗಂಡು ಮಕ್ಕಳಲ್ಲ. ಇವೆಲ್ಲ ಸಂಗತಿ ಗೊತ್ತಿದ್ದರೂ ತಪ್ಪು ಮಾಡುತ್ತಿರುವುದು ವಿಷಾದನೀಯ.
ವರದಕ್ಷಿಣೆಯನ್ನು ಪ್ರತಿಯೊಬ್ಬ ಮಹಿಳೆಯೂ ವಿರೋಧಿಸಬೇಕು. ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇರುವಾಗ ವರದಕ್ಷಿಣೆ ಏಕೆ ಬೇಕು? ಎಂದು ಹೇಳಿದರು.
ಕಳೆದ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಗರದ ಕೆಲವು ಬಡಾವಣೆಯಲ್ಲಿ ಮಾರಾಟವಾಗದೇ ಎಸೆದು ಹೋಗಿದ್ದ ಕಬ್ಬು, ಹಣ್ಣು-ತರಕಾರಿಗಳನ್ನು ಸಂಗ್ರಹಿಸಿ ಬನ್ನೇರುಘಟ್ಟದ ಆನೆ ಮತ್ತು ಇತರ ವನ್ಯಜೀವಿಗಳಿಗೆ ಆಹಾರವಾಗಿ ನೀಡಿದ್ದ ನಗರದ ಯುವತಿ ಹಿಶಿತಾ ಅವರಿಗೆ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಯಿತು.
ಈ ಬಾರಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ 6 ಸಂಸ್ಥೆಗಳು, 8 ವ್ಯಕ್ತಿಗಳು, ಕಲೆ 5, ಕ್ರೀಡೆ 2, ಶಿಕ್ಷಣ 1 ಮತ್ತು ಸಾಹಿತ್ಯ ಕ್ಷೇತ್ರದ ಮೂವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.