ಲಖ್ನೌ : ಉತ್ತರ ಪ್ರದೇಶದ ಬಿಜ್ ನೂರ್ನಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಡೆಪ್ಯುಟಿ ಎಸ್.ಪಿ ಮಹಮದ್ ತಂಝಿಲ್ ಎನ್ನುವವರು ಹತ್ಯೆಗೀಡಾಗಿದ್ದು , ತಡ ರಾತ್ರಿ 1.30 ರ ವೇಳೆಗೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಕೆ ಸಂಬಂಧಿಕರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ವಾಪಾಸಾಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮಹಮದ್ ತಂಝಿಲ್ ಅವರು ಸಾವನ್ನಪ್ಪಿದ್ದು ,ಗಂಭೀರವಾಗಿ ಗಾಯಗೊಂಡಿರುವ ಅವರ ಪತ್ನಿ ನೊಯ್ಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂಝಿಲ್ ಅವರು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮದುವೆ ಕಾರ್ಯಕ್ರಮಕ್ಕಾಗಿ ಹುಟ್ಟೂರಿಗೆ ಆಗಮಿಸದ್ದರು. ಅವರು ಎನ್.ಐ.ಎಯ ಹಲವು ತನಿಖೆ ಗಳಲ್ಲಿ ಭಾಗಿಯಾಗಿದ್ದರು. ತಂಝಿಲ್ ಅವರು ಪಠಾಣ್ ಕೋಟ್ ಉಗ್ರರ ದಾಳಿಯ ತನಿಖಾ ತಂಡದಲ್ಲಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಎನ್.ಐ.ಎ ಡಿಜಿ, ತಂಝಿಲ್ ಅವರು ಪಠಾಣ್ ಕೋಟ್ ಉಗ್ರರ ದಾಳಿಯ ತನಿಖಾ ತಂಡದಲ್ಲಿದ್ದರು ಎನ್ನುವುದನ್ನು ಅಲ್ಲಗಳೆದಿದ್ದಾರೆ.